ನವದೆಹಲಿ : ದೆಹಲಿಯಲ್ಲಿನ ಧಾರ್ಮಿಕ ಕಟ್ಟಡಗಳ ಮೇಲ್ಭಾಗದ ಧ್ವನಿವರ್ಧಕಗಳಿಗೆ ನಿಷೇಧ ಹೇರುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ನೋಟಿಸ್ ಜಾರಿ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜನವರಿ 29ಕ್ಕೆ ನಿಗದಿಪಡಿಸಿದೆ.
‘ಧ್ವನಿವರ್ಧಕಗಳು ಯಾವುದೇ ಧರ್ಮದ ಅಂಗವಲ್ಲ. ಎಲ್ಲಾ ಧರ್ಮಗಳು 4000–5000 ವರ್ಷಗಳ ಹಿಂದಿನವು. ಆದರೆ ಧ್ವನಿವರ್ಧಕಗಳ ಅನ್ವೇಷಣೆ ಆಗಿದ್ದು 1924ರಲ್ಲಿ. ಆದ್ದರಿಂದ ಧ್ವನಿವರ್ಧಕಗಳಿಗೆ ನಿಷೇಧ ಹೇರುವುದರಿಂದ ಸಂವಿಧಾನದ 25 ಅಥವಾ 26ನೇ ಕಲಂ (ಧಾರ್ಮಿಕ ಸ್ವಾತಂತ್ರ್ಯ ಕುರಿತು ಕಲಂ) ಉಲ್ಲಂಘಿಸಿದಂತೆ ಆಗುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸಂಜೀವ್ ಕುಮಾರ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.