ರಾಯಪುರ(ಪಿಟಿಐ/ಐಎಎನ್ಎಸ್): ‘ಛತ್ತೀಸಗಡದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 15 ಯೋಧರನ್ನು ಬಲಿತೆಗೆದುಕೊಂಡ ನಕ್ಸಲೀಯರ ವಿರುದ್ಧ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ’ ಎಂದು ಮತ್ತೊಮ್ಮೆ ಶಪಥ ಮಾಡಿರುವ ಕೇಂದ್ರ ಗೃಹ ಸಚಿವ ಸುಶೀಲ್್ ಕುಮಾರ್್ ಶಿಂಧೆ, ರಾಷ್ಟ್ರೀಯ ತನಿಖಾ ತಂಡವು (ಎನ್ಐಎ) ಈ ದಾಳಿಯ ತನಿಖೆ ಮಾಡಲಿದೆ ಎಂದಿದ್ದಾರೆ.
ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜಗದಾಳ್ಪುರದ ಪೊಲೀಸ್್ ಪರೇಡ್್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿದ ಅವರು, ‘ಲೋಕಸಭೆ ಚುನಾವಣೆಗೆ ಅಡ್ಡಿಯುಂಟುಮಾಡಲು ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಇವರ ಪತ್ತೆಗೆ ಕೇಂದ್ರ ಹಾಗೂ ರಾಜ್ಯದ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಿವೆ. ದಾಳಿಕೋರರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತು’ ಎಂದರು.
‘2013ರ ಮೇ ತಿಂಗಳಿನಲ್ಲಿ ಛತ್ತೀಸಗಡದಲ್ಲಿ ನಕ್ಸಲರು ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಿದ್ದೆವು. ಈಗ ಈ ಪ್ರಕರಣವನ್ನೂ ಎನ್ಐಎ ತನಿಖೆ ಮಾಡಲಿದೆ’ ಎಂದರು.
‘ನಕ್ಸಲ್್ ಚಳವಳಿ ದುರ್ಬಲವಾಗುತ್ತಿದೆ. ಅವರಲ್ಲಿ ಅಭದ್ರತೆ ಕಾಡುತ್ತಿದೆ. ಹಾಗಾಗಿ ಇಂಥ ದಾಳಿ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಕೂಡ ದಾಳಿ ನಡೆಸಿದ್ದರು. ಆದರೆ ಅದು ವಿಫಲವಾಗಿತ್ತು’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ಗುಪ್ತಚರ ಮಾಹಿತಿ ಇರಲಿಲ್ಲ: ಸುಕ್ಮಾ ದಲ್ಲಿ ನಕ್ಸಲ್್ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು ಎನ್ನುವ ವರದಿಗಳನ್ನು ಶಿಂಧೆ ಅಲ್ಲಗಳೆದರು.
‘ಎರಡು–ಮೂರು ಬಾರಿ ಗುಪ್ತಚರ ಮಾಹಿತಿ ಬಂದಿತ್ತು. ಆದರೆ ಅವು ನಿರ್ದಿಷ್ಟ ಮಾಹಿತಿಗಳಾಗಿರಲಿಲ್ಲ’ ಎಂದರು.
ಲೋಕಸಭೆ ಚುನಾವಣೆ ವೇಳೆ ಭದ್ರತಾ ಪಡೆ ನಿಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮಾತ್ರ ವಲ್ಲ, ಕರ್ನಾಟಕ,ತಮಿಳುನಾಡು ರಾಜ್ಯಗಳಿಗೂ ಭದ್ರತಾ ಪಡೆ ನಿಯೋಜಿಸಬೇಕಾಗುತ್ತದೆ. ಅಗತ್ಯವನ್ನು ಮನಗಂಡು ಭದ್ರತೆ ಒದಗಿಸಬೇಕಾಗುತ್ತದೆ’ ಎಂದರು.
12,183 ಬಲಿ
ನವದೆಹಲಿ (ಪಿಟಿಐ): ದೇಶದ 9 ರಾಜ್ಯಗಳಲ್ಲಿ ಕಳೆದ 20 ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 12,183 ಮಂದಿ ನಕ್ಸಲೀಯರ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ‘ಮೃತರದಲ್ಲಿ 9,471 ನಾಗಕರಿ ಕರು, 2,712 ಕೇಂದ್ರ ಹಾಗೂ ರಾಜ್ಯದ ಭದ್ರತಾ ಸಿಬ್ಬಂದಿ ಇದ್ದಾರೆ’ ಎಂದು ಗೃಹ ಸಚಿವಾಲಯ ಮಾಹಿತು ನೀಡಿದೆ.
ನಕ್ಸಲ್್ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ರಾಜ್ಯದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.