ADVERTISEMENT

ಪರಿಹಾರ ಕಾರ್ಯಾಚರಣೆಗೆ ಅಡ್ಡಿ

ಕೇದಾರನಾಥದಲ್ಲಿ ಪ್ರತಿಕೂಲ ಹವಾಮಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಡೆಹ್ರಾಡೂನ್ (ಪಿಟಿಐ): ಪ್ರತಿಕೂಲ ಹವಾಮಾನದಿಂದಾಗಿ ಕೇದಾರನಾಥದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಮತ್ತು ಹಿಮಾಲಯ -ರಾಮಬಾದ್‌ಗೆ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಈ ಮಧ್ಯೆ ಸಂತ್ರಸ್ತ ಪ್ರದೇಶಗಳಿಗೆ ಆಹಾರ ಪೂರೈಕೆ ಮಾಡುವ ಕಾರ್ಯ ಮುಂದುವರಿದಿದೆ.

ಕೇದಾರನಾಥ ಮತ್ತು ಹಿಮಾಲಯ ಶೃಂಗದಲ್ಲಿರುವ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ಸೇತುವೆ ನಿರ್ಮಿಸುವುದಕ್ಕಾಗಿ 61 ಸದಸ್ಯರ ತಂಡ ಕೇದಾರನಾಥಕ್ಕೆ ಆಗಮಿಸಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ. ಈ ಕಾರ್ಯ ಸದ್ಯ ಸ್ಥಗಿತಗೊಂಡಿದೆ ಎಂದು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಸಿಂಗ್ ಹೇಳಿದ್ದಾರೆ.

ಪ್ರವಾಹದಿಂದ ಸಂತ್ರಸ್ತಗೊಳಗಾಗಿರುವ ರುದ್ರಪ್ರಯಾಗದ ಗ್ರಾಮಗಳಿಗೆ ಸಾಗಿಸಲು 983 ಕ್ವಿಂಟಲ್ ಆಹಾರಧಾನ್ಯ ಮತ್ತು 288 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅವಶೇಷಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದೆ. ಇಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಪರಿಹಾರ ಕಾರ್ಯ ಕೈಗೊಳ್ಳಲು ಅಡ್ಡಿಯಾಗಿ ಪರಿಣಮಿಸಿದೆ. ಹೃಷಿಕೇಶ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿ ಅಗಸ್ತ್ಯಮುನಿಯವರೆಗೆ ಪುನರಾರಂಭವಾಗಿದೆ. ಅವಶೇಷಗಳು ಬಿದ್ದಿರುವುದರಿಂದ ಚಮೋಲಿ ಜಿಲ್ಲೆಯ ಹೃಷಿಕೇಶ- ಬದರಿನಾಥ ಹೆದ್ದಾರಿ ಕಮೇದಾ, ಪಾತಳಗಂಗಾ ಸಮೀಪ ಬಂದ್ ಆಗಿದೆ.

ಪ್ರತಿಕೂಲ ವಾತಾವರಣದ ಮಧ್ಯೆಯೂ 35 ಕ್ವಿಂಟಲ್ ಆಹಾರಧ್ವಾನ ಮತ್ತು 230 ಲೀಟರ್ ಸೀಮೆಎಣ್ಣೆ ಮತ್ತು ಡೀಸೆಲ್‌ನ್ನು ಸಂತ್ರಸ್ತ ಪ್ರದೇಶಗಳಿಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 6120 ಕ್ವಿಂಟಲ್ ಆಹಾರಧಾನವನ್ನು ಉತ್ತರಕಾಶಿಯ 146 ಗ್ರಾಮಗಳಿಗೆ ಪೂರೈಕೆ ಮಾಡಲಾಗಿದೆ.

`ಪುನರ್ವಸತಿ ಮತ್ತು ತೊಂದರೆಗೊಳಗಾಗಿರುವ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಣತರ ಅಭಿಪ್ರಾಯಗಳನ್ನು ಪಡೆಯಲಾಗುವುದು' ಎಂದು ಮುಖ್ಯಮಂತ್ರಿ ವಿಜಯ್ ಬಹುಗುಣ ಹೇಳಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.