ADVERTISEMENT

ಪ್ರತ್ಯೇಕ ಅಪಘಾತ: 17 ಸಾವು, 13 ಜನರ ಸ್ಥಿತಿ ಗಂಭೀರ

ಏಜೆನ್ಸೀಸ್
Published 13 ಮೇ 2018, 12:05 IST
Last Updated 13 ಮೇ 2018, 12:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 17 ಜನರು ಸಾವಿಗೀಡಾಗಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿರ್ಮೌರ್‌ ಜಿಲ್ಲೆಯಲ್ಲಿ ಖಾಸಗಿ ಬಸ್‌ವೊಂದು ಕಂದಕಕ್ಕೆ ಉರುಳಿ ಬಿದ್ದಿದೆ. ಸಲೋನ್‌ ಪಟ್ಟಣದಲ್ಲಿರುವ ರಾಜ್‌ಘರ್‌ ರಸ್ತೆಯಲ್ಲಿ ಸುಮಾರು 200 ಅಡಿ ಆಳದ ಕಂದಕಕ್ಕೆ ಎಚ್‌ಪಿ 64 9097 ಸಂಖ್ಯೆಯ ಭಾಗ್ನಲ್‌ ಟ್ರಾವೆಲ್‌ ಬಸ್‌ ಉರುಳಿದೆ.

ಇದರಿಂದಾಗಿ ಚಾಲಕ, ನಾಲ್ಕು ವರ್ಷದ ಮಗು ಸೇರಿದಂತೆ 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ 25 ಪ್ರಯಾಣಿಕರಿದ್ದರು ಎನ್ನಲಾಗಿದೆ. ರಕ್ಷಣಾ ಪಡೆಗಳು ಸ್ಥಳಕ್ಕಾಗಮಿಸುವ ವೇಳೆಗೆ ಸ್ಥಳೀಯರು ಸಂತ್ರಸ್ತರ ನೆರವಿಗೆ ದಾವಿಸಿದ್ದರು.

ADVERTISEMENT

ಸಿರ್ಮೌರ್‌ನ ಉಪ ಆಯುಕ್ತ ಲಲಿತ್‌ ಜೈನ್‌, ‘ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಸಂತ್ರಸ್ತರಲ್ಲಿ ಬಹುತೇಕರು ರಾಜ್‌ಘರ್‌ ಪ್ರದೇಶದವರು. ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ’ ಎಂದು ತಿಳಿಸಿದ್ದಾರೆ.

ಇದೇ ಮಾದರಿಯ ಇನ್ನೊಂದು ಅಪಘಾತ ಚೈಲ್‌ ಕಣಿವೆ ಪ್ರದೇಶದಲ್ಲಿನ ದಿಯಾಗ್‌–ಹಟ್ಕೋಟಿ ರಸ್ತೆಯಲ್ಲಿ ಸಂಭವಿಸಿದೆ. ಕಾರು 200 ಅಡಿ ಆಳದ ಕಂದಕಕ್ಕೆ ಉರುಳಿದೆ. ‘ಚಾಲಕ ಯು ಟರ್ನ್‌ ತೆಗೆದುಕೊಳ್ಳುವಾಗ ಈ ದುರಂತ ನಡೆದಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.

ಎಸ್ಟಿಲೊ ಕಾರಿನಲ್ಲಿದ್ದ ಎಲ್ಲರೂ (6 ಮಂದಿ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿಮ್ಲಾ ಸೂಪರಿಂಟೆಂಡೆಂಟ್‌ ಉಮಾಪತಿ ಜಬ್ವಾಲ್‌, ‘ಇನ್ನಷ್ಟೇ ಮೃತರ ಗುರುತು ಪತ್ತೆಮಾಡಬೇಕಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.