ನವದೆಹಲಿ: 2005ರಲ್ಲಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ‘ಪ್ರಶ್ನೆಗಾಗಿ ಲಂಚ’ ಹಗರಣಕ್ಕೆ ಸಂಬಂಧಿಸಿ 11 ಮಾಜಿ ಸಂಸದರ ವಿರುದ್ಧ ದೆಹಲಿ ನ್ಯಾಯಾಲಯವು ಗುರುವಾರ ದೋಷಾರೋಪವನ್ನು ನಿಗದಿ ಮಾಡಿದೆ.
ವಿಶೇಷ ನ್ಯಾಯಮೂರ್ತಿ ಕಿರಣ್ ಬನ್ಸಲ್ ಅವರು ದೋಷಾರೋಪ ನಿಗದಿಪಡಿಸಿದ್ದಾರೆ. ಜನವರಿ 12ರಿಂದ ವಿಚಾರಣೆ ಆರಂಭವಾಗಲಿದೆ. ಪ್ರತಿಯೊಬ್ಬರೂ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಬೇಕಿದೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಸಂಸದರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ಪತ್ರಕರ್ತರು ನಡೆಸಿದ ಮಾರುವೇಶದ ಕಾರ್ಯಾಚರಣೆ ವೇಳೆ ತಿಳಿದುಬಂದಿತ್ತು. ಆರೋಪಿಗಳು ಮತ್ತು ಇತರರ ನಡುವೆ ನಡೆದ ಸಂಭಾಷಣೆಯು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.
ಯಾರ ಮೇಲೆ ದೋಷಾರೋಪ?: ವೈ.ಜಿ. ಮಹಾಜನ್ (ಬಿಜೆಪಿ), ಛತರ್ಪಾಲ್ ಸಿಂಗ್ ಲೋಧಾ (ಬಿಜೆಪಿ), ಅಣ್ಣಾ ಸಾಹೇಬ್ ಎಂ.ಕೆ. ಪಾಟೀಲ್ (ಬಿಜೆಪಿ), ಮನೋಜ್ ಕುಮಾರ್ (ಆರ್ಜೆಡಿ), ಚಂದ್ರ ಪ್ರತಾಪ್ ಸಿಂಗ್ (ಬಿಜೆಪಿ), ರಾಮ್ ಸೇವಕ್ ಸಿಂಗ್ (ಕಾಂಗ್ರೆಸ್), ನರೇಂದ್ರ ಕುಮಾರ್ ಕುಶ್ವಾಹ (ಬಿಎಸ್ಪಿ), ಪ್ರದೀಪ್ ಗಾಂಧಿ (ಬಿಜೆಪಿ), ಸುರೇಶ್ ಚಂಡೇಲ್ (ಬಿಜೆಪಿ), ಲಾಲ್ ಚಂದ್ರ ಕೊಲ್ (ಬಿಎಸ್ಪಿ), ರಾಜಾ ರಾಮ್ಪಾಲ್ (ಬಿಎಸ್ಪಿ), ರಾಮ್ಪಾಲ್ ಅವರ ಆಪ್ತ ಸಹಾಯಕರಾಗಿದ್ದ ರವೀಂದರ್ ಕುಮಾರ್, ವಿಶೇಷ ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ.
ಹಗರಣದಲ್ಲಿ ಮಧ್ಯವರ್ತಿ ಎನ್ನಲಾಗಿದ್ದ ವಿಜಯ್ ಫೋಗಟ್ ಅವರು ನಿಧನ ಹೊಂದಿದ್ದರಿಂದ ಅವರ ಮೇಲಿನ ಪ್ರಕರಣವನ್ನು ಕೈಬಿಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.