ನವದೆಹಲಿ: ಫೇಸ್ಬುಕ್ ಖಾತೆದಾರರ ಮಾಹಿತಿಗೆ ಕನ್ನ ಹಾಕಿ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತಿರುವ ಕೇಂಬ್ರಿಜ್ ಅನಲಿಟಿಕಾ ಕಂಪನಿಯ ಸೇವೆಗೆ ಸಂಬಂಧಿಸಿ ಭಾರತದಲ್ಲಿ ರಾಜಕೀಯ ಕೆಸರೆರಚಾಟ ಆರಂಭವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಲಾಭ ಮಾಡಿಕೊಡುವ ಉದ್ದೇಶದಿಂದ, ಕೇಂಬ್ರಿಜ್ ಅನಲಿಟಿಕಾ ಕಂಪನಿಯು ಫೇಸ್ಬುಕ್ನ ಸುಮಾರು 5 ಕೋಟಿ ಬಳಕೆದಾರರ ಮಾಹಿತಿ ಕಳವು ಮಾಡಿದ ಸುದ್ದಿ ಬಹಿರಂಗವಾಗಿತ್ತು.
ಕೇಂಬ್ರಿಜ್ ಅನಲಿಟಿಕಾದ ಭಾರತೀಯ ಸಹವರ್ತಿ ಕಂಪನಿ ‘ಒಬಿಐ’ನ ಸೇವೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
‘ಭಾರತದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮತದಾರರ ಮಾಹಿತಿಗೆ ಕನ್ನ ಹಾಕುವ ಸಾಹಸ
ವನ್ನು ಮಾಡಬೇಡಿ’ ಎಂದು ಅವರು ಫೇಸ್ಬುಕ್ಗೆ ಎಚ್ಚರಿಕೆ ನೀಡಿದ್ದಾರೆ. ‘ಚುನಾವಣೆಗಳನ್ನು ಗೆಲ್ಲಲು ನೀವು ದತ್ತಾಂಶಗಳಿಗೆ ಕನ್ನ ಹಾಕುತ್ತೀರಾ ಎಂದು ನಾನು ಕಾಂಗ್ರೆಸ್ ಅನ್ನು ಕೇಳುತ್ತಿದ್ದೇನೆ. ನನ್ನ ಪ್ರಶ್ನೆ ತಪ್ಪೇ ಆಗಿದ್ದರೆ ರಾಹುಲ್ ಗಾಂಧಿಯ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯಲ್ಲಿ ಕೇಂಬ್ರಿಜ್ ಅನಲಿಟಿಕಾ ಕಂಪನಿಗೇನು ಕೆಲಸ’ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.
‘2010ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ– ಜೆಡಿಯು, ಕೇಂಬ್ರಿಜ್ ಅನಲಿಟಿಕಾ ಮತ್ತು ಒಬಿಐನ ಸೇವೆ ಪಡೆದುಕೊಂಡಿವೆ. ಬಿಜೆಪಿ ಎಂಬ ಸುಳ್ಳಿನ ಕಾರ್ಖಾನೆಯು ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷವು ಮತದಾರರ ಮಾಹಿತಿಗೆ ಕನ್ನಹಾಕಿದೆ ಎಂದು ಹೇಳಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.