
ಬೆಂಗಳೂರು: ಫ್ಲಿಪ್ಕಾರ್ಟ್ ಇ–ಕಾಮರ್ಸ್ ಸಂಸ್ಥೆ ತನ್ನ ಸಾಮಗ್ರಿ ವಿತರಿಸುವ ವ್ಯಕ್ತಿ (ಡೆಲಿವರಿ ಬಾಯ್ಸ್) ಗಳ ಹಿತಕ್ಕಾಗಿ ತುರ್ತು ಗುಂಡಿ ಸೇವೆ ಪ್ರಾರಂಭಿಸಿದೆ.
ಈ ಸೇವೆಗೆ ಇತ್ತೀಚೆಗೆ ನಗರದ ವಿಜಯನಗರದಲ್ಲಿ ಹತ್ಯೆಗೀಡಾದ ಡೆಲಿವರಿ ಬಾಯ್ ನಂಜುಂಡಸ್ವಾಮಿ ಅವರ ಹೆಸರಿಡಲಾಗಿದೆ.
‘ಸಾಮಗ್ರಿಗಳ ವಿತರಣೆಗೆ ವಿವಿಧ ಪ್ರದೇಶಗಳಿಗೆ ತೆರಳುವ ಡೆಲಿವರಿ ಬಾಯ್ಸ್ಗಳ ಭದ್ರತೆ ದೃಷ್ಟಿಯಿಂದ ನಂಜುಂಡಸ್ವಾಮಿ ಹತ್ಯೆಯಾದ ಒಂದು ತಿಂಗಳ ಒಳಗಾಗಿ ಈ ಮಾದರಿ ಸೇವೆ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ತುರ್ತು ಸೇವೆ ಒದಗಿಸುವುದು ಇದರ ಉದ್ದೇಶವಾಗಿದೆ’ ಎಂದು ಫ್ಲಿಪ್ಕಾರ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಸೇಠ್ ಹೇಳಿದ್ದಾರೆ.
ಭಾರಿ ಬ್ಯಾಗುಗಳನ್ನು ಹೊತ್ತು ಹೊರನಡೆಯುವ ಕೆಲಸಗಾರರ ಬಳಿಯ ಫೋನ್ನಲ್ಲಿ ತುರ್ತು ಗುಂಡಿಯನ್ನು (ಪ್ಯಾನಿಕ್ ಬಟನ್) ಅಳವಡಿಸಲಾಗಿದೆ. ಇದಕ್ಕೆ ನಂಜುಂಡ ಎಂದು ಹೆಸರಿಡಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಈ ಬಟನ್ ಒತ್ತಿದರೆ ತಕ್ಷಣವೇ ಹತ್ತಿರದ ಸೇವಾ ಕೇಂದ್ರಕ್ಕೆ ಎಸ್ಎಂಎಸ್, ಇ–ಮೇಲ್ ರವಾನೆಯಾಗುತ್ತದೆ. ಇದು ಫೋನಿನ ನೆಟ್ವರ್ಕ್ ಆಧಾರಿತ ಸೇವೆಯಾಗಿದೆ. ಭಾರತದ ಯಾವುದೇ ಭಾಗದಲ್ಲಿ ಇದನ್ನು ಬಳಸಬಹುದಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.