ನವದೆಹಲಿ (ಐಎಎನ್ಎಸ್): ಮಾರುವೇಷದ ಶಸ್ತ್ರಾಸ್ತ್ರ ಪೂರೈಕೆದಾರನಿಂದ ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಂಗಾರು ಲಕ್ಷ್ಮಣ್ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದರೆ, ಇದು ಬಿಜೆಪಿ ನಿಜವಾದ ಮುಖವನ್ನು ಬಯಲುಗೊಳಿಸಿದೆ ಎಂದು ಕಾಂಗ್ರೆಸ್ ಪ್ರಹಾರ ಮಾಡಿದೆ.
`ಇದು ಬಂಗಾರು ಅವರಿಗೆ ಸಂಬಂಧಿಸಿದ ವೈಯಕ್ತಿಕ ಪ್ರಕರಣ. ನ್ಯಾಯಾಲಯ ತೀರ್ಪಿನಲ್ಲಿ ಅವರ ವೈಯಕ್ತಿಕ ವರ್ತನೆ ಬಗ್ಗೆ ತೀರ್ಪು ನೀಡಿದೆಯೇ ಹೊರತು ಪಕ್ಷದ ಕುರಿತಾಗಿ ಅಲ್ಲ~ ಎಂದು ಬಿಜೆಪಿ ವಕ್ತಾರ ಶಾ ನವಾಜ್ ಹುಸೇನ್ ಸಮರ್ಥಿಸಿಕೊಂಡಿದ್ದಾರೆ.
`ಯಾವ ಸಾಕ್ಷ್ಯಾಧಾರವೂ ಇಲ್ಲದ 25 ವರ್ಷಗಳ ಹಿಂದಿನ ಬೊಫೋರ್ಸ್ ಪ್ರಕರಣವನ್ನು ಕೆದಕಲು ಬಿಜೆಪಿ ಸದಾ ತುದಿಗಾಲಲ್ಲಿ ನಿಂತಿರುತ್ತದೆ. ಅದೇ ರೀತಿ ಗುರುವಾರ ಸದನದಲ್ಲಿ, ತೆಹೆಲ್ಕಾ ಪ್ರಕರಣದ ತನಿಖೆಗೂ ನ್ಯಾಯಾಂಗ ಆಯೋಗ ರಚಿಸಲು ಒತ್ತಾಯಿಸಿದ್ದರೆ ಅದನ್ನು ಪ್ರಾಮಾಣಿಕ ಪಕ್ಷವೆಂದು ಒಪ್ಪುತ್ತಿದ್ದೆ~ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಛೇಡಿಸಿದರು. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದನ್ನು ಈ ತೀರ್ಪು ಸೂಚಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಹೇಳಿದರು.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಪ್ರತಿಕ್ರಿಯಿಸಿ, `ಇದು ನಮ್ಮ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿರುವುದನ್ನು ತೋರಿಸುತ್ತದೆ~ ಎಂದರು.
ಪ್ರಕರಣದ ಹೆಜ್ಜೆ ಜಾಡು
ಡಿ.23, 2000- ಜ.7, 2001: ರಹಸ್ಯ ಕಾರ್ಯಾಚರಣೆ ಭಾಗವಾಗಿ ಶಸ್ತ್ರಾಸ್ತ್ರ ಪೂರೈಕೆ ದಲ್ಲಾಳಿಯಂತೆ ಹೋಗಿದ್ದ ಮಾರುವೇಷದ ಪತ್ರಕರ್ತನಿಂದ ಬಂಗಾರು ಲಕ್ಷ್ಮಣ್ ಜತೆ ಎಂಟು ಬಾರಿ ಚರ್ಚೆ
2001ರ ಜನವರಿ ಮೊದಲ ವಾರ: ಬಂಗಾರು ಲಕ್ಷ್ಮಣ್ ಲಂಚಕ್ಕೆ ಕೈಯೊಡ್ಡಿದ್ದು
ಮಾರ್ಚ್ 13, 2001: ಶಸ್ತ್ರಾಸ್ತ್ರ ದಲ್ಲಾಳಿಯಿಂದ 1 ಲಕ್ಷ ರೂಪಾಯಿ ಲಂಚ ಪಡೆದದ್ದು
ಜುಲೈ 18, 2006: ಸಿಬಿಐ ನಿಂದ ಆರೋಪಪಟ್ಟಿ ಸಲ್ಲಿಕೆ
ಮೇ 2, 2001: ಬಂಗಾರು ವಿರುದ್ಧ ದೋಷಾರೋಪ
ಏ.2, 2012: ತೀರ್ಪು ಕಾಯ್ದಿರಿಸಿದ್ದ ದೆಹಲಿ ಕೋರ್ಟ್
ಏ.27, 2012: ತೀರ್ಪು ಪ್ರಕಟ; ತಿಹಾರ್ ಜೈಲಿಗೆ ಬಂಗಾರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.