ನವದೆಹಲಿ (ಪಿಟಿಐ): `ಡಿಸೆಂಬರ್ 16ರಂದು ಬಸ್ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರದ ಸಂದರ್ಭದಲ್ಲಿ ನಾವು ಇರಲಿಲ್ಲ' ಎಂದು ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.
`ನಾನು ಮತ್ತು ಪವನ್ ಗುಪ್ತಾ (ಪ್ರಕರಣದ ಇನ್ನೊಬ್ಬ ಆರೋಪಿ) ಘಟನೆ ನಡೆದ ವೇಳೆ ಬಸ್ನಲ್ಲಿ ಇರಲಿಲ್ಲ' ಎಂದು ಆರೋಪಿ ವಿನಯ್ ಶರ್ಮಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾನೆ.
`ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಬಿಂಬಿಸಲಾಗಿದೆ' ಎಂದು ತನ್ನ ಪರ ವಕೀಲ ಎ.ಪಿ.ಸಿಂಗ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾನೆ.
`ಘಟನೆ ನಡೆದ ಡಿಸೆಂಬರ್ 16ರ ರಾತ್ರಿ ದಕ್ಷಿಣ ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಾನು ಮತ್ತು ಪವನ್ ಪಾಲ್ಗೊಂಡ್ದ್ದಿದೆವು. ಈ ಬಗ್ಗೆ ನನ್ನ ಮೊಬೈಲ್ನಲ್ಲಿ ಚಿತ್ರಗಳು ಮತ್ತು ವಿಡಿಯೊ ದೃಶ್ಯಾವಳಿ ಇವೆ' ಎಂದು ವಿನಯ್ ಮಾಹಿತಿ ನೀಡಿರುವುದಾಗಿ ವಕೀಲ ಸಿಂಗ್, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರ ಗಮನಕ್ಕೆ ತಂದರು.
`ಆರೋಪಿಗಳ ರಕ್ಷಣೆಗೆ ಇದು ಬಹಳ ಮಹತ್ವದ್ದು. ಮೊಬೈಲ್ನಲ್ಲಿ ಕೆಲ ಪ್ರಮುಖ ಅಂಶಗಳಿವೆ. ಇದರಿಂದ ನನ್ನ ಕಕ್ಷೀದಾರ ಮುಗ್ಧ ಎಂದು ಸಾಬೀತು ಮಾಡಬಹುದು' ಎಂದು ವಕೀಲ ಸಿಂಗ್ ತಿಳಿಸಿದರು.
ಆರೋಪಿ ವಿನಯ್ ಬಂಧನದ ಬಳಿಕ ಆತನ ಮೊಬೈಲ್ ಪೊಲೀಸರ ವಶದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.