ADVERTISEMENT

ಬಾಬ್ರಿ ಮಸೀದಿ ಧ್ವಂಸ: ವಿಶೇಷ ಪ್ರಕರಣವಲ್ಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ನವದೆಹಲಿ (ಪಿಟಿಐ): ಬಾಬ್ರಿ ಮಸೀದಿ ಧ್ವಂಸ ಒಂದು ಘಟನೆ ಮಾತ್ರ. ಇದನ್ನು ಜನಪ್ರಿಯತೆ ಆಧಾರದಲ್ಲಿ ವಿಶೇಷ ಇಲ್ಲವೆ ಕನಿಷ್ಠವೆಂದು ಅರ್ಥೈಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.

 ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಹಾಗೂ ಇತರ 18 ಮಂದಿ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್ 18ಕ್ಕೆ ನಿಗದಿ ಮಾಡಿತು.

 ಇದೊಂದು ಘಟನೆ ಮಾತ್ರ. ಘಟನೆಯ ರೂವಾರಿಗಳು ನ್ಯಾಯಾಲಯದ ಪರಿದಿಯಲ್ಲಿದ್ದಾರೆ ಎಂದು ಎಚ್.ಎಲ್.ದತ್ತು ಮತ್ತು ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
ವಿಚಾರಣೆ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್, ಇದೊಂದು `ವಿಶೇಷ~ ಪ್ರಕರಣ ಎಂದು ಬಣ್ಣಿಸಿದರು. ಈ ಸಂದರ್ಭ ನ್ಯಾಯಪೀಠ, `ಇದೂ ಒಂದು ಸಾಮಾನ್ಯ ಪ್ರಕರಣ ಅಷ್ಟೆ. ಅದರಲ್ಲಿ ಖ್ಯಾತಿ ಅಥವಾ ವಿಶೇಷದ ಪ್ರಶ್ನೆ ಇಲ್ಲ~ ಎಂದು ಸ್ಪಷ್ಟಪಡಿಸಿತು.

 ಪ್ರಕರಣದ ಕೆಲವು ಆರೋಪಿಗಳು ತಮ್ಮ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಮಂಡಿಸದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು.

ಕಳೆದ ಮಾರ್ಚ್ 4ರಂದು ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರಿಗೆ ನೋಟಿಸ್ ನೀಡಿತ್ತು. ಈ ಪೈಕಿ ಎಲ್.ಕೆ.ಅಡ್ವಾಣಿ, ಬಾಳ್ ಠಾಕ್ರೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸತೀಶ್ ಪ್ರಧಾನ್, ಸಿ.ಆರ್.ಬನ್ಸಲ್, ಎಂ.ಎಂ.ಜೋಷಿ, ವಿನಯ್‌ಕಟಿಯಾರ್, ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಸಾಧ್ವಿ ರಿತಂಭರ, ವಿ.ಎಚ್.ದಾಲ್ಮಿಯಾ, ಮಹಾಂತ ಅವೈದ್ಯನಾಥ್, ಆರ್.ವಿ.ವೇದಾಂತಿ, ಪರಮ ಹಂಸ ರಾಚಂದ್ರ ದಾಸ್, ಬಿ.ಎಸ್.ಶರ್ಮಾ, ನಿತ್ಯಗೋಪಾಲ್‌ದಾಸ್, ಧರ್ಮದಾಸ್, ಸತೀಶ್ ನಗರ್ ಮತ್ತು ಮೊರೇಶ್ವರ ಸೇವ್ ಸೇರಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಈ ಎಲ್ಲರ ವಿರುದ್ಧ ಅಪರಾಧ ಸಂಚು ಪ್ರಕರಣ ಏಕೆ ದಾಖಲು ಮಾಡಿಕೊಳ್ಳಬಾರದೆನ್ನುವ ಕುರಿತು ಪ್ರತಿಕ್ರಿಯೆ ನೀಡುವಂತೆ ನ್ಯಾಯ ಪೀಠ ಸೂಚಿಸಿತ್ತು.

ಆರೋಪಿಗಳ ವಿರುದ್ಧ ಆರೋಪಗಳನ್ನು ಕೈಬಿಡುವಂತೆ ವಿಶೇಷ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟಿನ ಆದೇಶವನ್ನು ಸಿಬಿಐ 2010ರ ಮೇ 21ರಂದು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.