ಪಟ್ನಾ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಮಂದಿ ದುಷ್ಕರ್ಮಿಗಳು ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿಯು ಕಿಯುಲ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ. ರೈಲಿನಿಂದ ಹೊರಗೆಸೆದದ್ದರಿಂದ ಆಕೆಯ ಮೂಳೆಗಳು ಮುರಿದಿವೆ. ಪಟ್ನಾದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಾಲಕಿಯನ್ನು ಆಕೆಯ ಮನೆಯ ಸಮೀಪದಿಂದ ಅಪಹರಿಸಿದ 6–7 ಮಂದಿ ದುಷ್ಕರ್ಮಿಗಳು ಆಕೆಯನ್ನು ಖಾಲಿ ಮೈದಾನಕ್ಕೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಆಕೆಗೆ ಪ್ರಜ್ಞೆ ಬಂದಾಗ ತಾನು ರೈಲಿನಲ್ಲಿರುವುದು ತಿಳಿದಿದೆ. ಅಷ್ಟರಲ್ಲಿ ಪಕ್ಕದಲ್ಲಿದ್ದ ಇಬ್ಬರು ಚಲಿಸುತ್ತಿದ್ದ ರೈಲಿನಿಂದ ಬಾಲಕಿಯನ್ನು ಹಿಡಿದುಕೊಂಡು ಹೊರಗೆ ಎಸೆದಿದ್ದಾರೆ.
ಕೃತ್ಯ ಎಸಗಿರುವ ಬಾಲಕರು ಅಪ್ರಾಪ್ತರು ಎನ್ನಲಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.