ಪಟ್ನಾ: ವಿಮಾನ ನಿಲ್ದಾಣಕ್ಕೆ ತೆರಳಲು ಬಿಜೆಪಿ ಸಂಸದರೊಬ್ಬರಿಗೆ ಪ್ರತ್ಯೇಕವಾಗಿ ಬಸ್ ವ್ಯವಸ್ಥೆ ಮಾಡುವ ಮೂಲಕ ವಿವಿಐಪಿ ಸಂಸ್ಕೃತಿ
ಮೆರೆದಿರುವ ಪ್ರಕರಣ ಭಾನುವಾರ ನಡೆದಿದೆ.
ಮಧುಬನಿ ಕ್ಷೇತ್ರದ ಬಿಜೆಪಿ ಸಂಸದ ಹಕುಮ್ದೆವ್ ನರೇನ್ ಯಾದವ್ ಅವರು ಭಾನುವಾರ ಪಟ್ನಾದ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಜೆಟ್ಏರ್ವೇಸ್ ಮೂಲಕ ಪ್ರಯಾಣಿಸಬೇಕಿತ್ತು.
ವಿಮಾನ ನಿಲ್ದಾಣಕ್ಕೆ ತೆರಳಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಅವರೊಬ್ಬರಿಗಾಗಿಯೇ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಉಳಿದ ಪ್ರಯಾಣಿಕರೆಲ್ಲರೂ ಕಾಯಬೇಕಾಗಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
‘ರಾಷ್ಟ್ರಪತಿ ಅಥವಾ ಪ್ರಧಾನಿಗೆ ಇಂಥ ಸವಲತ್ತುಗಳಿವೆ. ಆದರೆ ಸಂಸದರಿಗೆ ವಿಶೇಷ ಸವಲತ್ತು ಕಲ್ಪಿಸಿಕೊಡುವುದು ಆಕ್ಷೇಪಾರ್ಹ’ ಎಂದು ಪಟ್ನಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಕುರಿತು ಸ್ಪಷ್ಟನೆ ನೀಡಿರುವ ಹಕುಮ್ದೆವ್ ಅವರು, ‘ಯಾವುದೇ ಸವಲತ್ತು ನೀಡುವಂತೆ ನಾನು ವಿಮಾನಯಾನ ಸಂಸ್ಥೆಗೆ ಕೋರಿರಲಿಲ್ಲ. ವಿಮಾನ ನಿಲ್ದಾಣದವರೆಗೆ ನಾನೊಬ್ಬನೇ ಬಸ್ನಲ್ಲಿ ಸಂಚರಿಸುತ್ತೇನೆ ಎಂದು ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.