ADVERTISEMENT

ಬಿಜೆಪಿ ಸರ್ಕಾರ ರಚನೆ ಪ್ರಶ್ನಿಸಿದ ಶತ್ರುಘ್ನ ಸಿನ್ಹಾ

ಪಿಟಿಐ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ   

ಪಟ್ನಾ : ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದನ್ನು ಪಕ್ಷದ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ. ಜನಶಕ್ತಿಯ ಬದಲಾಗಿ ಧನಶಕ್ತಿ ವಿಜೃಂಭಿಸಿರುವುದನ್ನು ಒಪ್ಪಲಾಗದು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಕ್ಷದ ಪ್ರಮುಖ ಟೀಕಾಕಾರ ಎನಿಸಿರುವ ಶತ್ರುಘ್ನ, ಕರ್ನಾಟಕದಲ್ಲಿ ಕಾಂಗ್ರೆಸ್–ಜೆಡಿಎಸ್ ಮಾಡಿಕೊಂಡಿರುವ ಚುನಾವಣೋತ್ತರ ಮೈತ್ರಿಗೆ ಬೆಂಬಲ ಸೂಚಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಂಬಿಕೆ ಇಲ್ಲದವರು ರಾಜಕೀಯವನ್ನು ಹಾಳುಮಾಡುತ್ತಾರೆ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

ಗೋವಾ, ಮೇಘಾಲಯ ಹಾಗೂ ಮಣಿಪುರದಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ, ಇತರ ಪಕ್ಷಗಳ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದನ್ನೂ ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಜನರಿಗೆ ಎಲ್ಲ ಸಮಯದಲ್ಲಿಯೂ, ಎಲ್ಲ ಕಡೆಗಳಲ್ಲಿಯೂ ಮೋಸ ಮಾಡಲಾಗದು. ಇದು ನಾಚಿಕೆಗೇಡಿನ ರಾಜಕೀಯ. ಸಾಕ್ಷಿಪ್ರಜ್ಞೆ, ಪಕ್ವತೆ ಮೂಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
*
ಅಲ್ಲೊಂದು, ಇಲ್ಲೊಂದು ಏಕೆ?
‘ಪೀಟರ್‌ಗೆ ಸರಿ ಎಂದ ಮೇಲೆ ಪೌಲ್‌ಗೂ ಅದೇ ಸರಿ ಅಲ್ಲವೇ? ಮೇಘಾಲಯ, ಮಣಿಪುರ, ಗೋವಾದಲ್ಲಿ ಮಾಡಿದ್ದು ಸರಿ ಎಂದಾದರೆ ಕರ್ನಾಟಕದಲ್ಲೂ ಅದೇ ಅನ್ವಯವಾಗಬೇಕಲ್ಲವೇ. ದೇವರು ಕರ್ನಾಟಕ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದಾನೆ. ಜೈ ಹಿಂದ್’
–ಶತ್ರುಘ್ನ ಸಿನ್ಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.