ADVERTISEMENT

ಬೀದಿ ಕಾಮಣ್ಣರಿಗೆ ಬುದ್ಧಿಕಲಿಸಿದ ಯುವತಿ!

ಪಿಟಿಐ
Published 2 ಏಪ್ರಿಲ್ 2018, 19:55 IST
Last Updated 2 ಏಪ್ರಿಲ್ 2018, 19:55 IST
ಬೀದಿ ಕಾಮಣ್ಣರಿಗೆ ಬುದ್ಧಿಕಲಿಸಿದ ಯುವತಿ!
ಬೀದಿ ಕಾಮಣ್ಣರಿಗೆ ಬುದ್ಧಿಕಲಿಸಿದ ಯುವತಿ!   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಮೂವರು ಕಿಡಿಗೇಡಿಗಳನ್ನು ಯುವತಿ
ಯೊಬ್ಬರು ಚೆನ್ನಾಗಿ ಥಳಿಸಿ, ತಕ್ಕ ಪಾಠ ಕಲಿಸಿದ್ದಾರೆ. ಆರೋಪಿಗಳಾದ ಅಮಿತ್ ಸಹಾನಿ, ದೀಪ್ ಮಂಡಲ್ ಹಾಗೂ ಭಾಸ್ಕರ್ ಮಂಡಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯ ತಾಯಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ದೂರು ದಾಖಲಿಸಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

10 ತಿಂಗಳಿನಿಂದ ಸಮರ ಕಲೆ ಅಭ್ಯಾಸ ಮಾಡುತ್ತಿರುವ ಪ್ರಿಯಾಂಕಾ ಸಿಂಗ್ ರಾಯ್, 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಯುವತಿಯು ತೋರಿರುವ ಧೈರ್ಯ ಅಪರೂಪದ್ದು ಎಂದು ಬಿರ್‌ಭೂಮ್ ಎಸ್‌ಪಿ ಎನ್.ಸುಧೀರ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಆಗಿದ್ದೇನು: ಕಾಮ್ರಪಾಡದ ಸೈಂಥಿಯಾದಲ್ಲಿ ಯುವತಿಯು ಮನೆ ಹತ್ತಿರದ ಅಂಗಡಿಗೆ ಹೋಗಿ ವಾಪಸಾಗುವಾಗ ಈ ಘಟನೆ ನಡೆದಿದೆ.  ದಾರಿ ಮಧ್ಯೆ ಎದುರಾದ ಮೂವರು ಅಪರಿಚಿತರು ಯುವತಿ ಬಗ್ಗೆ ಕಟ್ಟದಾಗಿ ಮಾತನಾಡಿದ್ದಾರೆ. ಅವರ ಪೈಕಿ ಒಬ್ಬನಂತೂ ಕೈಹಿಡಿದು ಎಳೆದಾಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುದ್ದಿ ತಿಳಿದು ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಹುಡುಗರು ನೆಲದಲ್ಲಿ ಹೊರಳಾಡುತ್ತಿದ್ದರು. ಯುವತಿಯು ಅವರಿಗೆ ಚೆನ್ನಾಗಿ ಥಳಿಸಿದ್ದಳು. ಅನುಚಿತವಾಗಿ ನಡೆದುಕೊಂಡ ಅವರಿಗೆ ಪಾಠ ಕಲಿಸಿರುವುದಾಗಿ ಆಕೆ ಹೇಳಿದಳು. ಆಕೆ ತೋರಿದ ಧೈರ್ಯ ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

‘ತನ್ನ ತಂಟೆಗೆ ಬರದಂತೆ ಎಚ್ಚರಿಸಿದರೂ ಕೇಳದ ಅವರಿಗೆ ಮಗಳು ಬುದ್ಧಿ ಕಳಿಸಿದ್ದಾಳೆ ಎಂದು ಪ್ರಿಯಾಂಕಾ ಅವರ ತಾಯಿ ಹೇಳಿದ್ದಾರೆ. ಮಗಳ ಮೇಲೆ ಸಂಪೂರ್ಣ ಭರವಸೆಯಿದೆ. ಪರೀಕ್ಷೆಯಲ್ಲೂ ಆಕೆ ಯಶಸ್ಸು ಗಳಿಸುತ್ತಾಳೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಮೆಚ್ಚುಗೆ

ಚುಡಾಯಿಸಲು ಬಂದ ಬೀದಿಕಾಮಣ್ಣರನ್ನು ಚೆನ್ನಾಗಿ ತದುಕಿದ ಪಶ್ಚಿಮ ಬಂಗಾಳದ ಯುವತಿಯನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವಿಟರ್‌ನಲ್ಲಿ ಹೊಗಳಿದ್ದಾರೆ. ಮಾಧ್ಯಮಗಳಲ್ಲಿ ಈ ವರದಿ ಗಮನಿಸಿದ ಅಕ್ಷಯ್, ಟ್ವೀಟ್ ಮಾಡಿ ಪ್ರಿಯಾಂಕಾ ಸಾಹಸವನ್ನು ಮೆಚ್ಚಿದ್ದಾರೆ. ‘ಈ ವರದಿ ಓದಲು ನಿಜಕ್ಕೂ ಸಂತಸವಾಗುತ್ತಿದೆ. ಆಕೆ ಎಲ್ಲರಿಗೂ ಮಾದರಿ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.