ತಿರುವನಂತಪುರ: ಕೇರಳದ ದೇವಾಲಯಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಿದ ಬೆನ್ನಲ್ಲೇ, ಜಾತಿಯನ್ನೂ ಮೀರಿ ಅರ್ಹ ಅರ್ಚಕರ ನೇಮಕ ಮಾಡುವುದಕ್ಕೆ ತನ್ನ ಬೆಂಬಲವಿದೆ ಎಂದು ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಹೇಳಿದೆ.
‘ಸಂಪ್ರದಾಯದಲ್ಲಿ ಹೇಳಿರುವಂತೆ ಪೂಜೆ ಮತ್ತು ತಂತ್ರಗಳ ಬಗ್ಗೆ ಜ್ಞಾನ ಇರುವ ಯಾರಾದರೂ ಗರ್ಭಗುಡಿಯೊಳಗೆ ಪ್ರವೇಶಿಸಲು ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಅರ್ಹರಾಗಿರುತ್ತಾರೆ. ಅಂಥ ವ್ಯಕ್ತಿಯು ಹುಟ್ಟಿನಿಂದ ಬ್ರಾಹ್ಮಣನಲ್ಲದಿದ್ದರೂ ತನ್ನ ಕೃತಿಗಳಿಂದ ಬ್ರಾಹ್ಮಣನಾಗುತ್ತಾನೆ ಎಂಬುದು ನಮ್ಮ ನಂಬಿಕೆ’ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ಎಸ್. ಬಿಜು ಬುಧವಾರ ಹೇಳಿದ್ದಾರೆ.
‘ಹಿಂದೂ ಧರ್ಮದ ಆಚರಣೆಯಲ್ಲಿ ನಿಜವಾದ ನಂಬಿಕೆ ಇರುವ ಮತ್ತು ಆಯಾ ದೇವಸ್ಥಾನಗಳ ಸಂಪ್ರದಾಯಗಳನ್ನು ಪಾಲಿಸುವ ಯಾರೇ ಆದರೂ ಪ್ರಾರ್ಥನೆ ಸಲ್ಲಿಸಲು ದೇವಾಲಯವನ್ನು ಪ್ರವೇಶಿಸಬಹುದು. ಅದು ಗುರುವಾಯೂರು ದೇವಾಲಯ ಅಥವಾ ಶಬರಿಮಲೆಯಾದರೂ ಆಗಿರಲಿ’ ಎಂದು ಅವರು ಹೇಳಿದ್ದಾರೆ.
ಶಬರಿಮಲೆ ದೇವಾಲಯ ಅರ್ಚಕ ಸ್ಥಾನಕ್ಕೆ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ಕಾರಣ ನೀಡಿ ತನಗೆ ಅರ್ಚಕ ಹುದ್ದೆಯನ್ನು ತಪ್ಪಿಸಲಾಗಿದೆ ಎಂದು ಬ್ರಾಹ್ಮಣೇತರ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಿರುದ್ಧ ಆರೋಪಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ.
ಟಿಡಿಬಿ ಅಧೀನದ ದೇವಾಲಯಗಳಿಗೆ ಆರು ದಲಿತರೂ ಒಳಗೊಂಡು ಒಟ್ಟೂ 36 ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.