ಅಹಮದಾಬಾದ್ (ಪಿಟಿಐ): ಅಮಾನತುಗೊಂಡಿರುವ ಹಾಗೂ ಬಂಧಿತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಕ್ರಿಮಿನಲ್ ನಡವಳಿಕೆ ಹೊಂದಿರುವುದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಗುಜರಾತ್ ಸರ್ಕಾರ ಗುರುವಾರ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತು.
ತನಿಖಾಧಿಕಾರಿ ಎನ್.ಸಿ.ಪಟೇಲ್ ಅವರು ಕೋರ್ಟಿಗೆ ಹಾಜರಾಗಿ ಈ ಸಂಬಂಧ ನ್ಯಾಯಮೂರ್ತಿ ವಿ.ಕೆ.ವ್ಯಾಸ್ ಅವರಿಗೆ ಈ ಪ್ರಮಾಣ ಪತ್ರ ಸಲ್ಲಿಸಿದರು. `ಭಟ್ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಒಂದು ವೇಳೆ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿವೆ~ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.
ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರಗಳ ವೇಳೆ ಬೆದರಿಕೆ ಹಾಗೂ ಸಾಕ್ಷ್ಯ ನಾಶ ಆರೋಪದ ಮೇರೆಗೆ ಸಂಜೀವ್ ಭಟ್ ಅವರನ್ನು ಬಂಧಿಸಲಾಗಿದೆ.
ಸಂಜೀವ್ ಭಟ್ ಅವರನ್ನು ರಾಜ್ಯದ ಪೊಲೀಸರು ಸೆರೆಮನೆಯಲ್ಲಿ ಭಯೋತ್ಪಾದಕನಂತೆ ಕಾಣುತ್ತಿದ್ದಾರೆ ಎಂದು ಭಟ್ ಅವರ ಪತ್ನಿ ಶ್ವೇತಾ ಅವರು ಕೇಂದ್ರ ಗೃಹ ಸಚಿವ ಚಿದಂಬರಂ ಅವರಿಗೆ ಬರೆದಿರುವ ತಮ್ಮ ಎರಡನೇ ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.