ಜೋಧ್ ಪುರ (ಪಿಟಿಐ): ಗೃಹಿಣಿ ಭನ್ವರಿ ದೇವಿ ಇನ್ನಿಲ್ಲ ಎಂಬುದಾಗಿ ಮಂಗಳವಾರ ರಾಜಸ್ತಾನ ಹೈಕೋರ್ಟಿಗೆ ತಿಳಿಸಿದ ಸಿಬಿಐ, ಭನ್ವರಿ ದೇವಿ ಪತಿ ಅಮರಚಂದ್ ಅವರು ಸಲ್ಲಿಸಿದ ~ಹೇಬಿಯಸ್ ಕಾರ್ಪಸ್~ ಅರ್ಜಿಯನ್ನು ತಳ್ಳಿಹಾಕಬೇಕು ಎಂದು ಮನವಿ ಮಾಡಿತು.
ಆದರೆ ನ್ಯಾಯಾಲಯವು ಅರ್ಜಿಯನ್ನು ತಳ್ಳಿಹಾಕಲು ನಿರಾಕರಿಸಿ, ಅಂತಿಮ ವರದಿಯನ್ನು ಫೆಬ್ರುವರಿ 21ರ ಒಳಗಾಗಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.
ನ್ಯಾಯಮೂರ್ತಿ ಗೋವಿಂದ ಮಾಥುರ್ ಮತ್ತು ನ್ಯಾಯಮೂರ್ತಿ ಎನ್.ಕೆ. ಜೈನ್ ಅವರನ್ನು ಒಳಗೊಂಡ ರಾಜಸ್ತಾನ ಹೈಕೋರ್ಟಿನ ವಿಭಾಗೀಯ ಪೀಠದ ಮುಂದೆ ಸಿಬಿಐ ಹಾಜರಾಗಿತ್ತು.
~ಭನ್ವರಿ ದೇವಿ ಶವ ಇಲ್ಲ. ಆದ್ದರಿಂದ ನ್ಯಾಯಾಲಯದ ಮುಂದೆ ಅದನ್ನು ಹಾಜರು ಪಡಿಸುವುದು ಅಸಾಧ್ಯ. ಈ ಕಾರಣದಿಂದ ಈ ಹೇಬಿಯಸ್ ಕಾರ್ಪಸ್ ಅರ್ಜಿ ಪ್ರಸ್ತುತತೆ ಕಳೆದುಕೊಂಡಿದೆ ಎಂದು ಅಡ್ವೋಕೇಟ್ ಜನರಲ್ ಆನಂದ ಪುರೋಹಿತ್ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಅಂತಿಮ ನಿರ್ಧಾರದತ್ತ ಸಿಬಿಐ ಬಂದಿದೆ. ಶೀಘ್ರದಲ್ಲೇ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದೂ ಅವರು ನುಡಿದರು.
ಈ ಹಂತದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಮತ್ತು ಫೆಬ್ರುವರಿ 21ರ ಒಳಗಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.