ನವದೆಹಲಿ (ಪಿಟಿಐ): ಭೋಪಾಲ್ ಅನಿಲ ದುರಂತದಲ್ಲಿ ನೀಡಿದ ಪರಿಹಾರ ಕಡಿಮೆ, ಅದನ್ನು ಹೆಚ್ಚಿಸಬೇಕೆಂಬ ಮನವಿಯ ಪ್ರಕರಣವನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಆಪಾದಿತರಾಗಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕೆಳನ್ಯಾಯಾಲಯ ಭೋಪಾಲ್ ಅನಿಲ ದುರಂತದಲ್ಲಿ ಮಡಿದವರಿಗೆ ಹೆಚ್ಚಿನ ಪರಿಹಾರ ನೀಡಬೇಕಿತ್ತೆಂಬ ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ 1989 ಮತ್ತು 1991ರ ಸಾಲಿನಲ್ಲಿ ಪ್ರಕಟಗೊಂಡ ಸಂಬಂಧಿತ ನ್ಯಾಯಾಲಯಗಳ ತೀರ್ಪುಗಳನ್ನು ಸರಿಪಡಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನ ಮೊರೆಹೋಗಿತ್ತು.
1984 ರ ಭೋಪಾಲ್ ಅನಿಲ ದುರಂತದಲ್ಲಿ ಮಡಿದವರಿಗೆ ಯುನಿಯನ್ ಕಾರ್ಬೈಡ್ ಮತ್ತು ಇತರೆ ಬಹುರಾಷ್ಟ್ರೀಯ ಕಂಪೆನಿಗಳು ಕೊಡುವಂತೆ ಈ ಹಿಂದೆ ನಿಗದಿಯಾಗಿದ್ದ ಪರಿಹಾರದ ಮೊತ್ತವನ್ನು 750 ಕೋಟಿ ರೂಪಾಯಿಯಿಂದ 7,700 ಕೋಟಿ ರೂಪಾಯಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಕೋರಿಕೆ ಸಲ್ಲಿಸಿತ್ತು.
‘ಕೇಂದ್ರ ಸರ್ಕಾರದ ಮನವಿಯಂತೆ ಏ.13ರಿಂದ ಪ್ರತಿ ದಿನ ಪ್ರಕರಣದ ವಿಚಾರಣೆಯನ್ನು ನಡೆಸಲಾಗುವುದು~ ಎಂದು ಮುಖ್ಯ ನ್ಯಾಯಾಧೀಶ ಎಸ್. ಕಪಾಡಿಯ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.