ನವದೆಹಲಿ: ತಿಂಗಳ ರೇಡಿಯೊ ಕಾರ್ಯಕ್ರಮ ‘ಮನದ ಮಾತಿಗೆ’ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರಿಂದ ಸ್ಫೂರ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗಾಗಿ ಪುಸ್ತಕ ಬರೆಯಲಿದ್ದಾರೆ. ಈ ಬಗ್ಗೆ ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ ಪ್ರಕಾಶನ ಮಾಹಿತಿ ಬಹಿರಂಗಪಡಿಸಿದ್ದು, ವರ್ಷಾಂತ್ಯಕ್ಕೆ ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.
ಪರೀಕ್ಷೆಯ ಒತ್ತಡವನ್ನು ಎದುರಿಸುವುದು, ಪರೀಕ್ಷೆಯ ನಂತರ ಏನು ಮಾಡಬೇಕು ಎಂಬುದೂ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ಬರೆಯಲಿದ್ದಾರೆ. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಸಂಬಂಧಿಸಿ ಹೆಚ್ಚಿನ ಅಂಶಗಳು ಪುಸ್ತಕದಲ್ಲಿರಲಿವೆ. ವಿವಿಧ ಭಾಷೆಗಳಲ್ಲಿ ಪ್ರಕಟವಾಗಲಿರುವ ಪುಸ್ತಕ ವಿದ್ಯಾರ್ಥಿಸ್ನೇಹಿಯಾಗಿರಲಿದೆ ಎಂದು ಪ್ರಕಾಶನ ತಿಳಿಸಿದೆ.
‘ಯುವಕರನ್ನು ಉದ್ದೇಶಿಸಿ ಹಾಗೂ ಯುವ ಆಧಾರಿತ ನಾಳೆಗಳ ಬಗ್ಗೆ ನನ್ನ ದೃಷ್ಟಿಕೋನವನ್ನು ಒಳಗೊಂಡ, ನನ್ನ ಹೃದಯಕ್ಕೆ ಹತ್ತಿರವೆನಿಸಿದ ವಿಷಯಗಳನ್ನು ಬರವಣಿಗೆಗ ಆಯ್ದುಕೊಂಡಿದ್ದೇನೆ’ ಎಂದು ಪ್ರಧಾನಿಯವರ ಹೇಳಿಕೆ ಉಲ್ಲೇಖಸಿ ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ ಹೇಳಿಕೆ ಬಿಡುಗಡೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.