ತಿರುವನಂತಪುರ: ‘ಮಹಿಳೆಯರು ಜೀನ್ಸ್ ಮತ್ತು ಶರ್ಟ್ ತೊಟ್ಟರೆ ತೃತೀಯ ಲಿಂಗಿ ಮಕ್ಕಳು ಜನಿಸುತ್ತಾರೆ’ ಎಂಬ ಹೇಳಿಕೆ ನೀಡಿದ ಪ್ರೊಫೆಸರ್ ಒಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ಕೇರಳ ಸರ್ಕಾರ ಮುಂದಾಗಿದೆ.
‘ಮಹಿಳಾ ವಿರೋಧಿ ಹೇಳಿಕೆ ನೀಡಿರುವ ಪ್ರಾಧ್ಯಾಪಕ ರಂಜಿತ್ ಕುಮಾರ್, ಹೇಳಿಕೆಯನ್ನು ಹಿಂಪಡೆಯದ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ’ ಎಂದು ಆರೋಗ್ಯ ಸಚಿವ ಕೆ.ಕೆ. ಶೈಲಜಾ ಹೇಳಿದ್ದಾರೆ.
‘ಕಾಸರಗೋಡಿನ ಶ್ರೀ ಶಂಕರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ರಂಜಿತ್ ಕುಮಾರ್ ನಿರಂತರವಾಗಿ ಮೂಢನಂಬಿಕೆಯನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಪೋಷಕರ ನಡತೆ ಉತ್ತಮವಾಗಿಲ್ಲದಿದ್ದರೆ ಆಟಿಸಂ ಮತ್ತು ಮಿದುಳಿನ ಸಮಸ್ಯೆ ಇರುವ ಮಕ್ಕಳು ಜನಿಸುತ್ತಾರೆ ಎಂದೂ ಹೇಳಿದ್ದರು. ಈ ಹಿಂದೆಯೂ ಮಹಿಳೆಯರ ವಿರುದ್ಧ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.