ADVERTISEMENT

ಮಾಜಿ ಮುಖ್ಯಕಾರ್ಯದರ್ಶಿಯ ತನಿಖೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಹೈದರಾಬಾದ್ (ಐಎಎನ್‌ಎಸ್): ವೈಎಸ್‌ಆರ್ ಕಾಂಗ್ರೆಸ್ ನಾಯಕ ಮತ್ತು ಸಂಸದ ವೈ.ಎಸ್. ಜಗನ್ಮೋಹನರೆಡ್ಡಿ ಅವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಆಂಧ್ರಪ್ರದೇಶ ಮಾಜಿ ಮುಖ್ಯ ಕಾರ್ಯದರ್ಶಿ ರಮಾಕಾಂತ ರೆಡ್ಡಿ ಅವರನ್ನು ತನಿಖೆಗೆ ಒಳಪಡಿಸಿತು.

 ಈಗ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ರಮಾಕಾಂತ, ಜಗನ್ಮೋಹನ ರೆಡ್ಡಿ ತಂದೆ ವೈ. ಎಸ್. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಮುಖ್ಯ ಕಾರ್ಯದರ್ಶಿಯಾಗಿದ್ದರು.

ನಿರಂತರವಾಗಿ ಎರಡನೇ ದಿನವೂ ಅವರನ್ನು ತನಿಖೆಗೆ ಒಳಪಡಿಸಿದ ಸಿಬಿಐ, ರಾಜಶೇಖರ ರೆಡ್ಡಿ ತಮ್ಮ ಅಧಿಕಾರದ ಅವಧಿಯಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯಗಳ ಯೋಜನೆಯ ಮಂಜೂರಾತಿಗೆ ಪ್ರತಿಯಾಗಿ ಪಡೆದಿರುವ `ಕೊಡುಗೆ~ಗಳ ಬಗ್ಗೆ ಪ್ರಶ್ನಿಸಿತು.

ಈ ಹಿಂದೆ ಮೂಲಸೌಲಭ್ಯ ಮತ್ತು ಬಂಡವಾಳ ಹೂಡಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಹಾಲಿ ಐಎಎಸ್ ಅಧಿಕಾರಿ ಅಜಯ್ ಮಿಶ್ರಾ ಅವರನ್ನೂ ಸಿಬಿಐ ಗುರುವಾರ ತನಿಖೆಗೊಳಪಡಿಸಿತ್ತು.

ಜಗನ್‌ಗೆ ಸೇರಿದ ಎಂಆರ್ ಪ್ರಕರಣದಲ್ಲಿ ಗೃಹ ಕಾರ್ಯದರ್ಶಿ ಬಿ.ಪಿ. ಆಚಾರ್ಯ ಅವರನ್ನು ಬಂಧಿಸಲಾಗಿದ್ದು, ತಿರುಮಲ ತಿರುಪತಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಐಎಎಸ್ ಅಧಿಕಾರಿ ಎಲ್. ವಿ. ಸುಬ್ರಹ್ಮಣ್ಯಂ ಅವರ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.