ನಾಗಪುರ (ಪಿಟಿಐ): ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಒಡೆತನದ ಪೂರ್ತಿ ಸಕ್ಕರೆ ಕಾರ್ಖಾನೆಯು ಮಾನನಷ್ಟ ಮೊಕದ್ದಮೆ ದಾಖಲಿಸಿದ ಕಾರಣ ಸ್ಥಳೀಯ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಪಕ್ಷದ ನಾಗಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ದಮಾನಿಯಾ ಮತ್ತು ಇತರ ಐವರು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದೆ.
ಅರವಿಂದ ಕೇಜ್ರಿವಾಲ್, ಅಂಜಲಿ ದಮಾನಿಯಾ ಮತ್ತು ಎಎಪಿಯ 5 ಕಾರ್ಯಕರ್ತರು ಆಧಾರ ರಹಿತ ಮತ್ತು ಮಾನಹಾನಿಯ ಆರೋಪ ಮಾಡಿದ್ದರು ಎಂದು ಪೂರ್ತಿ ಪವರ್ ಮತ್ತು ಸಕ್ಕರೆ ಕಾರ್ಖಾನೆ ನ್ಯಾಯಾಲಯಕ್ಕೆ ದೂರು ನೀಡಿತ್ತು.
ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿರುವ ಸಿವಿಲ್ ಕೋರ್ಟ್ನ್ಯಾಯಾಧೀಶ ಎಸ್.ವೈ. ಅಭಿಜಿತ್ ಪ್ರಕರಣದ ವಿಚಾರಣೆಯನ್ನು ಮಾ. 21ಕ್ಕೆ ಮುಂದೂಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಆಪಾದನೆಗಳಿಗೆ ಕಡಿವಾಣ ಹಾಕಲು ಸೂಕ್ತ ಆದೇಶ ನೀಡಬೇಕು ಎಂದು ಕೋರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ದಿವೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.