ADVERTISEMENT

ಮಾಮೂಲು ಸ್ಥಿತಿಗೆ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ನವದೆಹಲಿ: ಭಯೋತ್ಪಾದಕರ ದಾಳಿಗೆ ಗುರಿಯಾದ ಹೈಕೋರ್ಟ್ ಮಾಮೂಲು ಸ್ಥಿತಿಗೆ ಮರಳಿದ್ದು, ಗುರುವಾರ ಕಲಾಪ ನಡೆಯಿತು. ಪಾಸ್ ವಿತರಣಾ ಕೌಂಟರ್ ಅನ್ನು ಗೇಟ್ ಸಂಖ್ಯೆ 7ರ ಮುಂಭಾಗದ ಎನ್‌ಡಿಎಂಸಿ ಶಾಲಾ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಐದು ಕೌಂಟರ್‌ಗಳನ್ನು ತೆರೆಯಲಾಗಿದ್ದು, ಕಂಪ್ಯೂಟರ್ ಒಳಗೊಂಡು ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ.

 ಘಟನಾ ಸ್ಥಳ ಸೇರಿದಂತೆ ಕೋರ್ಟ್ ಸುತ್ತಮುತ್ತ ಭದ್ರತೆ ತೀವ್ರಗೊಳಿಸಲಾಗಿದೆ. ಕೋರ್ಟ್‌ಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಸಹಕರಿಸುವಂತೆ ವಕೀಲರಿಗೂ ಮನವಿ ಮಾಡಲಾಗಿದೆ.

ಗೃಹ ಸಚಿವ ಪಿ.ಚಿದಂಬರಂ ಗುರುವಾರ ಹಿರಿಯ ಅಧಿಕಾರಿಗಳ ಜತೆ ಪರಿಸ್ಥಿತಿಯ ಅವಲೋಕನ ಮಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಎನ್‌ಎಐ ಮುಖ್ಯಸ್ಥ ದೆಹಲಿ ಪೊಲೀಸ್ ಕಮಿಷನರ್ ಅವರನ್ನು ಕಂಡು ಮಾಹಿತಿ ವಿನಿಮಯ ಮಾಡಿಕೊಂಡರು.

ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ್ದ ಗೃಹ ಸಚಿವಾಲಯ ಕಾರ್ಯದರ್ಶಿ ಆರ್.ಕೆ. ಸಿಂಗ್, ವಿಧಿವಿಜ್ಞಾನ ಪ್ರಯೋಗಾಲಯದಿಂದ ಪ್ರಾಥಮಿಕ ವರದಿ ಬಂದಿದೆ. ಇನ್ನು ಕೆಲವು ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಬುಧವಾರದ ಘಟನೆ ಕುರಿತು ತನಿಖೆ ನಡೆಸುತ್ತಿರುವ ಎನ್‌ಐಎಗೆ ಮೇ 25ರಂದು ಇದೇ ನ್ಯಾಯಾಲಯದ ಗೇಟ್ 7ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಸರ್ಕಾರ ಹಸ್ತಾಂತರ ಮಾಡಿದೆ. ತನಿಖೆಗೆ ಎನ್‌ಐಎ ದೆಹಲಿ, ಜಮ್ಮು- ಕಾಶ್ಮೀರ ಮತ್ತು ನೆರೆಹೊರೆ  ರಾಜ್ಯಗಳ ಪೊಲೀಸರ ನೆರವನ್ನು ಪಡೆದಿದೆ.
 
`ಹುಜಿ~ ಹೆಸರಿನಲ್ಲಿ ಬಂದಿರುವ ಇ-ಮೇಲ್ ಸಂಸತ್ ಮೇಲಿನ ದಾಳಿ ಸಂಬಂಧ ಮರಣ ದಂಡನೆಗೆ ಗುರಿಯಾಗಿರುವ ಅಫ್ಜಲ್ ಗುರುವಿನ ಶಿಕ್ಷೆ ರದ್ದುಪಡಿಸುವಂತೆ ಒತ್ತಡ ಹೇರಲು ಈ ಸ್ಫೋಟ ಎಸಗಲಾಗುತ್ತಿದೆ. ಶಿಕ್ಷೆ ರದ್ದು ಮಾಡದಿದ್ದರೆ ಇನ್ನಷ್ಟು ದಾಳಿ ನಡೆಸುವುದಾಗಿ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.