ನವದೆಹಲಿ (ಪಿಟಿಐ): ದೆಹಲಿಯ ಎಎಪಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವಣ ಆಡಳಿತಾತ್ಮಕ ಸಂಘರ್ಷ ಮುಂದುವರಿದ್ದು, ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ನೇಮಕಗೊಂಡಿರುವ ಜಂಟಿ ಪೊಲೀಸ್ ಆಯುಕ್ತ ಎಂ.ಕೆ. ಮೀನಾ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಎಎಪಿ ಸರ್ಕಾರ ಮಂಗಳವಾರ ಅನುಮತಿ ನಿರಾಕರಿಸಿದೆ.
ನಕಲಿ ಶೈಕ್ಷಣಿಕ ಪ್ರಮಾಣಪತ್ರ ಸಲ್ಲಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಕಾನೂನು ಸಚಿವ ಜಿತೇಂದ್ರ ತೋಮರ್ ಅವರನ್ನು ಮಂಗಳವಾರ ಬಂಧಿಸಿದ್ದ ಬೆನ್ನಲ್ಲೆ, ದೆಹಲಿ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.
ಎಸಿಬಿಯಲ್ಲಿ ಜಂಟಿ ಆಯುಕ್ತರ ಹುದ್ದೆ ಇಲ್ಲ. ಆದ್ದರಿಂದ ಎಸಿಬಿ ಸೇರಲು ಸಾಧ್ಯವಿಲ್ಲ ಎಂದು ಮೀನಾ ಅವರಿಗೆ ದೆಹಲಿ ಸರ್ಕಾರವು ತಿಳಿಸಿದೆ. ಆದರೆ, ತಾನು ಲೆಫ್ಟಿನೆಂಟ್ ಗವರ್ನರ್ ಆದೇಶವನ್ನು ಪಾಲಿಸುವುದಾಗಿ ಮೀನಾ ಅವರು ಸ್ಪಷ್ಟಪಡಿಸಿದ್ದಾರೆ.
ತುರ್ತು ಪರಿಸ್ಥಿತಿಯ ಸನ್ನಿವೇಶ: ಮೀನಾ ನೇಮಕ ಸಂಬಂಧ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ‘ದೆಹಲಿಯಲ್ಲಿ ತುರ್ತುಪರಿಸ್ಥಿತಿಯಂಥ ಸನ್ನಿವೇಶ ಸೃಷ್ಟಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ದಳಕ್ಕೆ ಹೊಸ ಮುಖ್ಯಸ್ಥರ ಹುದ್ದೆ ಹುಟ್ಟುಹಾಕುವ ಅಕ್ರಮ ಪ್ರಯತ್ನಗಳು ನಡೆಯುತ್ತಿವೆ. ಎಸಿಬಿಯನ್ನು ತಮ್ಮ ವ್ಯಾಪ್ತಿಗೆ ಪಡೆಯುವಂಥ ಸನ್ನಿವೇಶವನ್ನು ಅವರು ಸೃಷ್ಟಿಸುತ್ತಿದ್ದಾರೆ. ಇದು ಅಸಾಂವಿಧಾನಿಕ’ ಎಂದು ಸಿಸೋಡಿಯಾ ಅವರು ಆರೋಪಿಸಿದ್ದಾರೆ.
ಆಗಿದ್ದೇನು?: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಯ್ಕೆಯಾಗಿದ್ದ ಎಸ್.ಎಸ್. ಯಾದವ್್ ಅವರನ್ನು ಎಸಿಬಿ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಿದ್ದ ದೆಹಲಿ ಲೆಫ್ಟಿನೆಂಟ್್ ಗವರ್ನರ್್ ನಜೀಬ್್ ಜಂಗ್, ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಮೀನಾ ಅವರನ್ನು ಎಸಿಬಿಯ ನೂತನ ಮುಖ್ಯಸ್ಥರನ್ನಾಗಿ ಸೋಮವಾರ (ನಿನ್ನೆ) ನೇಮಿಸಿದ್ದರು.
ಸಾಮಾನ್ಯವಾಗಿ ಮೊದಲೆಲ್ಲ ಹೆಚ್ಚುವರಿ ಆಯುಕ್ತ ಶ್ರೇಣಿಯ ಅಧಿಕಾರಿಯನ್ನು ಎಸಿಬಿ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತಿತ್ತು. ಆದರೆ, ನಿನ್ನೆ ಲೆಫ್ಟನೆಂಟ್ ಗವರ್ನರ್ ಅವರು ಹುದ್ದೆಯ ಮುಖ್ಯಸ್ಥರ ಶ್ರೇಣಿಯನ್ನು ಹೆಚ್ಚುವರಿ ಆಯುಕ್ತರ ಶ್ರೇಣಿಯಿಂದ ಜಂಟಿ ಆಯುಕ್ತರ ಶ್ರೇಣಿಗೆ ಹೆಚ್ಚಿಸಿದ್ದರು.
ಮೀನಾ ಅವರು ಪ್ರಸ್ತುತ ದೆಹಲಿಯ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಎಎಬಿಯ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.