ಬರೇಲಿ: ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಯ ಕಾರಿನ ಬಾನೆಟ್ ಹತ್ತಿದ್ದ ಯುವಕನನ್ನು ಹೊತ್ತುಕೊಂಡೇ ಕಾರು ನಾಲ್ಕು ಕಿಲೋ ಮೀಟರ್ ಸಾಗಿದ ಘಟನೆ ಉತ್ತರ ಪ್ರದೇಶದ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ವಿಭಾಗೀಯ ಅಭಿವೃದ್ಧಿ ಅಧಿಕಾರಿಯೇ (ಬಿಡಿಒ)ಈ ದೃಶ್ಯವನ್ನು ವಿಡಿಯೊ ಮಾಡಿ ಯುಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತ ಶೌಚಾಲಯಗಳ ನಿರ್ಮಾಣ ಮಾಡಿತ್ತು. ಆದರೆ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿತ್ತು. ಹಣ ನೀಡುವಂತೆ ಕಾರ್ಮಿಕರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಿಡಿಒ ಪಂಕಜ್ ಕುಮಾರ್ ಗೌತಮ್ ಸ್ಥಳಕ್ಕೆ ಬಂದರು. ಬ್ರಿಜ್ಪಾಲ್ ಎಂಬಾತ ಗೌತಮ್ ಅವರನ್ನು ತಡೆಯಲು ಅವರ ಕಾರಿನ ಬಾನೆಟ್ ಮೇಲೆ ಹತ್ತಿದರು. ಇವರನ್ನು ಕೆಳಗೆ ಇಳಿಸದೆ 4 ಕಿ.ಮೀ ದೂರು ಕಾರು ಚಲಾಯಿಸಿದರು.
ಬಿಡಿಒ ಹಾಗೂ ಪ್ರತಿಭಟನಾನಿರತ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಅನಲಾ ಪೊಲೀಸರು ತಿಳಿಸಿದ್ದಾರೆ. ‘ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖೆ ನಡೆಸುತ್ತೇವೆ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವೀರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.