ADVERTISEMENT

ರಾಜನಾಥ್ ಬಡೇ ದಿಲ್‌ವಾಲಾ

ಅಡ್ವಾಣಿ ವಿರುದ್ಧ ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಪಣಜಿ (ಪಿಟಿಐ): ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ದೂರ ಉಳಿದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು `ವಿಶಾಲ ಹೃದಯಿ' ಎಂದು ಬಣ್ಣಿಸಿದ್ದಾರೆ.

ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಹೊಸ ಜವಾಬ್ದಾರಿ ವಹಿಸಿದ ರಾಜನಾಥ್ ಸಿಂಗ್ ಅವರನ್ನು ಮನಸಾರೆ ಕೊಂಡಾಡಿದರು. `ಅವರ ಹೃದಯ ವೈಶಾಲ್ಯವನ್ನು ಹೊರಗಿನವರು ಅರ್ಥ ಮಾಡಿಕೊಳ್ಳಲಾರರು' ಎಂದರು.

`ರಾಜನಾಥ್ ಸಿಂಗ್ ಕೇವಲ ಹೊಸ ಹೊಣೆಯನ್ನು ಮಾತ್ರ ವಹಿಸಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನತೆ ಎದುರು ನನಗೆ ಭಾರಿ ಗೌರವ ತೋರಿಸಿದ್ದಾರೆ. ಆದರಿಸಿ, ಗೌರವಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ತುಂಬಾ ಆಭಾರಿಯಾಗಿದ್ದೇನೆ' ಎಂದು ಕೃತಜ್ಞತೆ ಸಲ್ಲಿಸಿದರು.

ಭಾಷಣ ಮಾಡಲು ಎದ್ದುನಿಂತ ಮೋದಿ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದ ರಾಜನಾಥ್ ಸಿಂಗ್ `ಜನಪ್ರಿಯ ನಾಯಕರು ಸಮಾರಂಭದ ಕೊನೆಯಲ್ಲಿ ಮಾತನಾಡಲಿ' ಎಂದು ಹೇಳಿದರು. ಈ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, `ಭಾಷಣ ಮಾಡಲು ಎದ್ದು ನಿಂತ ನನ್ನನ್ನು ಕುಳಿತುಕೊಳ್ಳಲು ಹೇಳಿ ರಾಜನಾಥ್ ಸಿಂಗ್  ಮಾತನಾಡಿದರು. ಹೊರಗಿನವರಿಗೆ ಇದರ ಹಿಂದಿನ ಮರ್ಮ ಮತ್ತು ಮಹತ್ವ ಅರ್ಥವಾಗಲಾರದು. ಉನ್ನತ ಹುದ್ದೆಯನ್ನು ಹೊಂದಿದ ಮಾತ್ರಕ್ಕೆ ವ್ಯಕ್ತಿಯೊಬ್ಬ ಈ ರೀತಿ ಹೇಳಲಾರ.

ಆ ವ್ಯಕ್ತಿಗೆ ಹೃದಯ ವೈಶಾಲ್ಯವೂ ಇರಬೇಕು. ಇದಕ್ಕೆ ಹೇಳುವುದು `ದರಿಯಾ ದಿಲ್' ಎಂದು. ಅದನ್ನು ರಾಜನಾಥ್ ಪ್ರದರ್ಶಿಸಿದ್ದಾರೆ' ಎಂದು ಹೊಗಳಿಕೆಯ ಹೂಮಳೆ ಗೆರೆದರು.

ದೇಶದ ಪ್ರತಿಷ್ಠೆಗೆ ಧಕ್ಕೆ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಭಾರತವನ್ನು ಸ್ಥಾಪನೆ ಮಾಡಬೇಕಾದ ಅಗತ್ಯವಿದೆ. ಸಿಂಗ್ ಸರ್ಕಾರ ಭ್ರಷ್ಟಾಚಾರ ಹಗರಣಗಳ ಸುಳಿಗೆ ಸಿಲುಕಿ ದೇಶದ ಪ್ರತಿಷ್ಠೆ  ಹಾಳು ಮಾಡಿದೆ ಎಂದು ಆರೋಪಿಸಿದರು.

ಗುಜರಾತಿನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ನಿಲ್ಲಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದರು. ಈ ಪ್ರತಿಮೆಗೆ ಪ್ರತಿ ಹಳ್ಳಿಯಿಂದಲೂ ಕಬ್ಬಿಣ ಮತ್ತಿತರ ಲೋಹದ ತುಣಕುಗಳನ್ನು ತರುವ ಮೂಲಕ ಪ್ರತಿಯೊಬ್ಬರೂ ಈ ಕೆಲಸದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.