ನವದೆಹಲಿ: ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸುಮಾರು 17 ವಿರೋಧ ಪಕ್ಷಗಗಳ ನಾಯಕರು ಬುಧವಾರ ಸಭೆ ಸೇರಲಿವೆ.
ಸದ್ಯ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಣವ್ ಮುಖರ್ಜಿ ಅವರ ಅವಧಿ ಜುಲೈ 24ಕ್ಕೆ ಮುಕ್ತಾಯವಾಗಲಿದೆ. ಜುಲೈ 17ಕ್ಕೆ ರಾಷ್ಪ್ರಪತಿ ಚುನಾವಣೆಗೆ ದಿನಾಂಕ ನಿಗಧಿಯಾಗಿರುವುದರಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಕರೆಯಲಾಗಿದೆ.
ಈ ಸಂಬಂಧ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೇ 26ರಂದು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಲ್ಲಾ ವಿರೋಧ ಪಕ್ಷಗಳ ನಾಯಕರು ಒಮ್ಮತಕ್ಕೆ ಬರಬೇಕೆಂದು ಕರೆ ನೀಡಿದ್ದರು. ಆದರೆ, ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬರುವುದು ಅಸಾಧ್ಯವಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಣವ್ ಮುಖರ್ಜಿ ಅವರನ್ನೇ ಮತ್ತೊಂದು ಅವಧಿಗೆ ಬೆಂಬಲಿಸಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್ ಇದಕ್ಕೆ ಅಸಮ್ಮತಿ ಸೂಚಿಸಿದ್ದು, ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಸಕ್ತಿ ತೋರಿದೆ.
ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಹಿರಿಯ ನಾಯಕ ಶರದ್ ಪವಾರ್ ಅವರನ್ನು ಕಣಕ್ಕಿಳಿಸುವ ಯೋಜನೆಯಲ್ಲಿವೆ. ಆದರೆ, ಪವಾರ್ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಹಾಗಾಗಿ, ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಅವರನ್ನು ಸಹ ಭೇಟಿ ಮಾಡಲಾಗಿದ್ದು, ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರನ್ನು ಸಹ ಅಭ್ಯರ್ಥಿಯಾಗಿ ಪರಿಗಣಿಸುವ ಸಾಧ್ಯತೆಗಳಿವೆ.
ಜತೆಗೆ, ಕೇಂದ್ರ ಸರ್ಕಾರವೇ ಎಲ್ಲಾ ಪಕ್ಷದ ನಾಯಕರಿಗೆ ಒಪ್ಪಿಗೆ ಆಗುವಂತಹ ಅಭ್ಯರ್ಥಿಯನ್ನು ಸೂಚಿಸಿದರೆ ಒಪ್ಪಿಕೊಳ್ಳುವುದಾಗಿಯೂ ವಿಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ. ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಶೀವಸೇನಾ ಪಕ್ಷಗಳು ಎನ್ಡಿಎ ಒಕ್ಕೂಟದಿಂದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೆಸರನ್ನು ಪ್ರಸ್ತಾಪಿಸಿವೆ.
ರಾಷ್ಟ್ರಪತಿ ಸ್ಥಾನ ಜುಲೈ 25ಕ್ಕೆ ಪ್ರಣವ್ ಮುಖರ್ಜಿ ಅವರಿಂದ ತೆರವಾಗಲಿದೆ. ಈ ವೇಳೆ ಅಮಿದ್ ಅನ್ಸಾರಿ ಅವರ ಎರಡನೇ ಅವಧಿಯೂ ಮುಕ್ತಾಯವಾಗಲಿದೆ.
ಚುನಾವಣಾ ಆಯೋಗ ನಾಮಪತ್ರ ಸಲ್ಲಿಕೆಗೆ ಜೂನ್ 28ನ್ನು ಕೊನೆಯ ದಿನವಾಗಿ ಘೋಷಿಸಿದ್ದು, ಜುಲೈ 20ಕ್ಕೆ ಮತ ಎಣಿಕೆ ದಿನಾಂಕ ಪ್ರಕಟಿಸಿದೆ. ರಾಷ್ಟ್ರಪತಿ ಅವರನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸಕರು ಸಂಸದರುಗಳನ್ನು ಒಳಗೊಂಡ ಎಲೆಕ್ಟ್ರೋಲ್ ಕಾಲೇಜ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.