ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ 23 ದಿನಗಳ ಕಲಾಪ ವ್ಯರ್ಥವಾಗಿರುವುದರಿಂದ ಎನ್ಡಿಎ ಮೈತ್ರಿಕೂಟದ ಸಂಸದರು ಅಷ್ಟೂ ದಿನಗಳ ವೇತನ ತ್ಯಜಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಹೇಳಿದ್ದರು. ಆದರೆ, ಈ ಕುರಿತು ನಮಗೆ ಮಾಹಿತಿ ಇಲ್ಲ. ನಮ್ಮ ಬಳಿ ಚರ್ಚಿಸದೆ ಬಿಜೆಪಿ ನಿರ್ಧಾರ ಕೈಗೊಂಡಿದೆ ಎಂದು ಎನ್ಡಿಎ ಮಿತ್ರಪಕ್ಷಗಳಾದ ‘ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್ಎಲ್ಎಸ್ಪಿ)’ ಮತ್ತು ಶಿವಸೇನಾ ಹೇಳಿವೆ.
ಸಂಸದರು ವೇತನ ತ್ಯಜಿಸುವ ವಿಷಯದ ಬಗ್ಗೆ ಮಾಹಿತಿ ಇಲ್ಲ ಎಂದು ಆರ್ಎಲ್ಎಸ್ಪಿ ಮುಖ್ಯಸ್ಥ, ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಹೇಳಿದ್ದಾರೆ.
ವೇತನ ಪಡೆಯುತ್ತೇವೆ ಎಂದ ಶಿವಸೇನಾ ಸಂಸದರು: ವೇತನ ತ್ಯಜಿಸುವ ನಿರ್ಧಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಎನ್ಡಿಎ ಮಿತ್ರಪಕ್ಷ ಶಿವಸೇನಾ ಹೇಳಿದೆ. ಆ ಬಗ್ಗೆ ಬಿಜೆಪಿ ನಮ್ಮ ಬಳಿ ಚರ್ಚಿಸಿಲ್ಲ. ನಮ್ಮ ಪಕ್ಷದ ಸಂಸದರೆಲ್ಲ ವೇತನ ಪಡೆಯಲಿದ್ದಾರೆ ಎಂದು ಸೇನಾ ಹೇಳಿದೆ. ಇದು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿದೆ.
ಎನ್ಡಿಎ ಮಿತ್ರಪಕ್ಷಗಳ ಜತೆ ಚರ್ಚಿಸಿ ವೇತನ ತ್ಯಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅನಂತಕುಮಾರ್ ಹೇಳಿದ್ದರು. ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ನಂತರ ಅತಿ ಹೆಚ್ಚು ಸಂಸದರನ್ನು (18) ಹೊಂದಿರುವ ಪಕ್ಷ ಶಿವಸೇನಾ ಆಗಿದೆ.
ಕಲಾಪ ವ್ಯರ್ಥವಾಗಲು ಬಿಜೆಪಿಯೇ ಕಾರಣ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿರುವುದರಿಂದ ಸಂಸತ್ನಲ್ಲಿ ಕಲಾಪ ನಡೆಯುವುದು ಬಿಜೆಪಿಗೆ ಬೇಕಿಲ್ಲ. ಬಜೆಟ್ ಅಧಿವೇಶನದ ಕಲಾಪ ವ್ಯರ್ಥವಾಗಲು ಬಿಜೆಪಿಯೇ ಕಾರಣ ಎಂದು ಶಿವಸೇನಾ ಟೀಕಿಸಿದೆ.
‘ಸಂಸತ್ನಲ್ಲಿ ಕಲಾಪ ನಡೆಯದಿದ್ದರೂ ನಮ್ಮ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವಾಲಯಗಳ ಜತೆ ಸಭೆಗಳನ್ನು ನಡೆಸಿದ್ದೇವೆ’ ಎಂದು ಶಿವಸೇನಾ ಸಂಸದ ಅರವಿಂದ ಸಾವಂತ್ ಹೇಳಿದ್ದಾರೆ.
‘ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಸಂದರ್ಭ ಮಾತ್ರ ಬಿಜೆಪಿಗೆ ಮಿತ್ರ ಪಕ್ಷಗಳ ನೆನಪಾಗುತ್ತದೆ’ ಎಂದು ಅವರು ಟೀಕಿಸಿದ್ದಾರೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.