ಜಮ್ಮು: ಶೇ100ರಷ್ಟು ಬಯಲು ಶೌಚಮುಕ್ತಗೊಳಿಸಲು ಮುಂದಾಗಿರುವ ಕಿಶ್ತ್ವಾರ್ ಜಿಲ್ಲಾಡಳಿತ, ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳದ 616 ಸರ್ಕಾರಿ ನೌಕರರ ವೇತನ ತಡೆಹಿಡಿದಿದೆ.
ಕಿಶ್ತ್ವಾರ್ ಜಿಲ್ಲೆಯ ಪದ್ದಾರ್ ಬ್ಲಾಕ್ ನಲ್ಲಿರುವ ಸರ್ಕಾರಿ ನೌಕರರ 616 ಮನೆಗಳಲ್ಲಿ ಶೌಚಾಲಯ ಸೌಲಭ್ಯ ಇಲ್ಲ ಎಂದು ಸಹಾಯಕ ಆಯುಕ್ತ ಅನಿಲ್ ಕುಮಾರ್ ಚಾಂಡೈಲ್ ಈಚೆಗೆ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದರು.
ಈ ವರದಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾ ಅಭಿವೃದ್ಧಿ ಆಯುಕ್ತ ಅಂಗ್ರೇಜ್ ಸಿಂಗ್ ರಾಣಾ ತಿಳಿಸಿದ್ದಾರೆ.
‘ಇದು ನಾಚಿಕೆಗೇಡಿನ ವಿಷಯ. ಸರ್ಕಾರಿ ಉದ್ಯೋಗಿಯಾಗಿ, ನಮ್ಮ ವರ್ತನೆ ಮತ್ತು ಜೀವನಶೈಲಿಯು ಇತರರಿಗೆ ಮಾದರಿಯಾಗಿರಬೇಕು’ ಎಂದು ರಾಣಾ ಅಭಿಪ್ರಾಯಪಟ್ಟಿದ್ದಾರೆ.
ಶೇ 57.23ರಷ್ಟು ಪ್ರಗತಿ: ಸ್ವಚ್ಛ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ ಶೇ 57.23ರಷ್ಟು ಮನೆಗಳಲ್ಲಿ ವೈಯಕ್ತಿಕ ಗೃಹ ಶೌಚಾಲಯಗಳನ್ನು (ಐಎಚ್ಎಚ್ಎಲ್) ನಿರ್ಮಿಸಲಾಗಿದೆ. ಲಡಾಖ್ ಪ್ರಾಂತ್ಯದ ಲೇಹ್ ಮತ್ತು ಕಾರ್ಗಿಲ್, ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಶ್ರೀನಗರ ಜಿಲ್ಲೆಗಳನ್ನು ‘ಬಯಲು ಶೌಚಮುಕ್ತ’ ಜಿಲ್ಲೆಗಳೆಂದು ಘೋಷಿಸಲಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚು ಗುರಿ ಸಾಧಿಸಿದ ಜಿಲ್ಲೆಗಳು
ಜಿಲ್ಲೆ ಗುರಿ ಸಾಧನೆ (ಶೇ)
ಪುಲ್ವಾಮಾ; 98.64
ಅನಂತನಾಗ್; 98.43
ಕುಪ್ವಾರಾ; 91.92
ರಜೌರಿ; 84.53
ಕುಲ್ಗಾಂ; 72.95
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.