ನವದೆಹಲಿ (ಪಿಟಿಐ/ಐಎಎನ್ಎಸ್): ಪದೇಪದೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊರಟಿದ್ದು, ಕುಡಿದು ವಾಹನ ಚಾಲನೆ ಮಾಡುವವರು, ಸಿಗ್ನಲ್ ಜಂಪ್ ಮಾಡುವವರು, ವಾಹನ ಓಡಿಸುವಾಗ ಮೊಬೈಲ್ನಲ್ಲಿ ಮಾತನಾಡುವವರಿಗೆ ಹೊಸ ಕಾಯ್ದೆ ಅಡಿ ಭಾರಿ ಮೊತ್ತದ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಾಯಿತು. ಈ ಹೊಸ ತಿದ್ದುಪಡಿ ಮಸೂದೆ ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ವಿಧಿಸುವ ದಂಡದ ಪ್ರಮಾಣವನ್ನು ತಿದ್ದುಪಡಿ ಮಸೂದೆಯಲ್ಲಿ ಐದು ಪಟ್ಟು ಹೆಚ್ಚಿಸಲಾಗಿದೆ. ರಸ್ತೆ ಅಪಘಾತದಲ್ಲಿ ಮಡಿದವರಿಗೆ ಹಾಗೂ ಗಾಯಗೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ.
ಸತ್ತವರಿಗೆ ನೀಡುವ ಕನಿಷ್ಠ ಪರಿಹಾರದ ಮೊತ್ತವನ್ನು 25 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ ನೀಡುವ ಕನಿಷ್ಠ ಪರಿಹಾರ 50 ಸಾವಿರ ರೂಪಾಯಿಗೆ ಏರಿಕೆಯಾಗಿದೆ.
ಮದ್ಯಪಾನ ಮಾಡಿ, ಮಾದಕ ವಸ್ತು ಸೇವಿಸಿ ವಾಹನ ಓಡಿಸುವವರಿಗೆ, ವಾಹನ ಓಡಿಸುವಾಗ ಫೋನಿನಲ್ಲಿ ಮಾತನಾಡುವವರಿಗೆ ಅಧಿಕ ಮೊತ್ತದ ದಂಡ ವಿಧಿಸಲಾಗುತ್ತದೆ.
ಅತಿವೇಗವಾಗಿ ವಾಹನ ಓಡಿಸುವವರು, ಸೀಟ್ ಬೆಲ್ಟ್ ಕಟ್ಟದೇ ಇರುವವರು ಹಾಗೂ ಹೆಲ್ಮೆಟ್ ಧರಿಸದೇ ಗಾಡಿ ಓಡಿಸುವ ದ್ವಿಚಕ್ರ ವಾಹನ ಸವಾರರು ಸಹ ದಂಡಕ್ಕೆ ಗುರಿಯಾಗುತ್ತಾರೆ.
ಎರಡನೇ ಬಾರಿ ಇದೇ ತಪ್ಪು ಮಾಡಿದಲ್ಲಿ ದಂಡದ ಮೊತ್ತ ಹಾಗೂ ಜೈಲು ಶಿಕ್ಷೆಯ ಅವಧಿ ಹೆಚ್ಚಾಗಲಿದೆ. ಮತ್ತೆಮತ್ತೆ ಸಂಚಾರ ನಿಯಮ ಉಲ್ಲಂಘಿಸುವವರನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿದು ವಾಹನ ಓಡಿಸುವವರಿಗೆ ಸೇವಿಸಿದ ಮದ್ಯದ ಪ್ರಮಾಣದ ಆಧಾರದಲ್ಲಿ ರೂ. 2,000ದಿಂದ ರೂ. 10,000 ಹಾಗೂ ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.