ADVERTISEMENT

ಸಚಿವೆ ರಾಖಿ ಕಾರಿಗೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:58 IST
Last Updated 5 ಜನವರಿ 2014, 19:58 IST

ನವದೆಹಲಿ (ಪಿಟಿಐ):  ದುಷ್ಕರ್ಮಿಗಳು ದೆಹಲಿ ಸರ್ಕಾರದ, ಆಮ್‌ ಆದ್ಮಿ ಪಕ್ಷದ  ಸಚಿವೆ ರಾಖಿ ಬಿರ್ಲಾ ಅವರ ಕಾರಿನ ಮೇಲೆ ಕಲ್ಲು ಎಸೆದ ಘಟನೆ ದೆಹಲಿಯಲ್ಲಿ ಭಾನು­ವಾರ ನಡೆದಿದೆ.

ಸಂಜೆ 6ಗಂಟೆಗೆ ಸಂತೋಷಿ ಮಾ ಮಂದಿರಕ್ಕೆ ಹೋಗುತ್ತಿದ್ದಾಗ ದುಷ್ಕರ್ಮಿ­ಗಳು ಅವರ ಕಾರಿಗೆ ಕಲ್ಲು ಎಸೆದು  ಕಾರಿನ ಗಾಜಿಗೆ ಹಾನಿ ಮಾಡಿದ್ದಾರೆ. ರಾಖಿ, ತಮ್ಮ ಖಾಸಗಿ ಕಾರಿನ ಮುಂದಿನ ಆಸನದಲ್ಲಿಯೇ ಕುಳಿತಿದ್ದರು. ಘಟನೆಯಲ್ಲಿ ಅವರಿಗೆ ಗಾಯವಾಗಿಲ್ಲ.

ದಾಳಿ ನಡೆದ ಮೇಲೂ ಭದ್ರತೆಗಾಗಿ ಅವರು ಕೇಳಿಕೊಂಡಿಲ್ಲ. ಇಂತಹ ದಾಳಿಗೆ ತಾವು ಎದೆಗುಂದುವುದಿಲ್ಲ ಎಂದು ರಾಖಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಿರುಗಿ ಬರುವ ಸಮಯದಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ಪ್ರಕರಣ ದಾಖಲಿಸಿದ್ದು ಯಾರನ್ನೂ ಬಂಧಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.