ADVERTISEMENT

ಸಭಾಪತಿ ಮೇಲೆ ಹೆಡ್‌ಫೋನ್ ಎಸೆದ ಶಾಸಕ

ಪಿಟಿಐ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಸಭಾಪತಿ ಮೇಲೆ ಹೆಡ್‌ಫೋನ್ ಎಸೆದ ಶಾಸಕ
ಸಭಾಪತಿ ಮೇಲೆ ಹೆಡ್‌ಫೋನ್ ಎಸೆದ ಶಾಸಕ   

ಹೈದರಾಬಾದ್: ಸೋಮವಾರ ಆರಂಭವಾದ ತೆಲಂಗಾಣ ಬಜೆಟ್ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಶಾಸಕ ಕೋಮತಿರೆಡ್ಡಿ ವೆಂಕಟರೆಡ್ಡಿ ಅವರು ತಮ್ಮ ಹೆಡ್‌ಫೋನ್‌ ಅನ್ನು ಎಸೆದ ಕಾರಣ ಸಭಾಪತಿ ಕೆ. ಸ್ವಾಮಿ ಗೌಡ್ ಅವರು ಗಾಯಗೊಂಡಿದ್ದಾರೆ.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪರಿಷತ್ತಿನ ಸಭಾಪತಿಯವರು ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಹಾಗೂ ವಿಧಾನಸಭೆ ಸ್ಪೀಕರ್ ಸಿರಿಕೊಂಡ ಮಧುಸೂದನ ಚಾರಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು.

ರೆಡ್ಡಿ ಅವರು ಎಸೆದ ಹೆಡ್‌ಫೋನ್ ಮೊದಲಿಗೆ ಮಹಾತ್ಮ ಗಾಂಧಿ ಅವರ ಫೋಟೊಗೆ ತಗುಲಿ ಅಲ್ಲಿಂದ ಸಭಾಪತಿ ಅವರ ಮೇಲೆ ಬಿದ್ದಿತು. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಸರೋಜಿನಿದೇವಿ ಆಸ್ಪತ್ರೆಗೆ ಕಳುಹಿಸಲಾಯಿತು.

ADVERTISEMENT

ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದ ಅವರು ಭಾಷಣದ ಪ್ರತಿಗಳನ್ನು ತೂರಿದರು. ರಾಜ್ಯಪಾಲರ ಭಾಷಣಕ್ಕೆ ಪ್ರತಿಪಕ್ಷ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೋಮತಿರೆಡ್ಡಿ ಅವರು ಈ ಮೊದಲೇ ಹೇಳಿಕೆ ನೀಡಿದ್ದರು.

ಘಟನೆಗೆ ಕಾರಣರಾದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಸುಳಿವನ್ನು ಸಚಿವ ಟಿ. ಹರೀಶ್ ರಾವ್ ಅವರು ನೀಡಿದರು. ’ಪ್ರತಿಭಟನೆಗೆ ಅವಕಾಶವಿದೆ. ಆದರೆ ಇದು ಅತಿಯಾಯಿತು. ಸದನದ ಕಾನೂನಿನ ಪ್ರಕಾರ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

ಕೋಮತಿ ರೆಡ್ಡಿ ವೆಂಕಟರೆಡ್ಡಿ ಯಾರು?

ಕೋಮತಿರೆಡ್ಡಿ ಅವರು ನಲ್ಗೊಂಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಯಾದ ಬೊಡ್ಡುಪಲ್ಲಿ ಶ್ರೀನಿವಾಸ ಅವರ ಆಪ್ತ. ಈ ಹತ್ಯೆ ಹಿಂದೆ ಆಡಳಿತಾರೂಢ ಟಿಆರ್‌ಎಸ್ ಕೈವಾಡವಿದೆ ಎಂಬುದು ಅವರ ಆರೋಪ. ಘಟನೆ ನಡೆದ ದಿನದಿಂದಲೂ  ಟಿಆರ್‌ಎಸ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ. ಆಡಳಿತಾರೂಢ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುವ ಎಚ್ಚರಿಕೆಯನ್ನೂ ನೀಡುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.