ADVERTISEMENT

ಸಮನ್ವಯ ಸಮಿತಿಗೆ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ನವದೆಹಲಿ: ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಹರಸಾಹಸ ಮಾಡಿ ವಿಫಲರಾದ ರಾಜ್ಯದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸ­ಲಾಗಿದ್ದು, ಪಕ್ಷ ಮತ್ತು ಸರ್ಕಾರದ ನಡುವಣ ಹೊಂದಾಣಿಕೆಗಾಗಿ ನೇಮಿಸಲಾಗಿರುವ ಸಮನ್ವಯ ಸಮಿತಿ ಸದಸ್ಯ ಸ್ಥಾನ ಕೊಡಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಅಕ್ರಮ ಗಣಿಗಾರಿಕೆ ಆರೋಪ ದಲ್ಲಿ ಶಿವಕುಮಾರ್‌ ಹೆಸರೂ ಕೇಳಿ ಬಂದಿದ್ದರಿಂದಾಗಿ ಸಿದ್ದರಾಮಯ್ಯ­ನವರ ಸಂಪುಟದಲ್ಲಿ ಸಚಿವ ಸ್ಥಾನ ನಿರಾಕರಿಸಲಾಗಿತ್ತು. ಈಗ ಅವರಿಗೆ ಸಮನ್ವಯ ಸಮಿತಿ ಸದಸ್ಯ ಸ್ಥಾನ ನೀಡುವುದರೊಂದಿಗೆ ಅವರಿಗಿದ್ದ ಅಸ ಮಾಧಾ­ನವನ್ನು ಹೈಕಮಾಂಡ್‌ ದೂರ ಮಾಡಿದೆ.

ಸದಸ್ಯರು: ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸಂಚಾಲಕ ರಾಗಿರುವ ಸಮನ್ವಯ ಸಮಿತಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌, ಕಾರ್ಯದರ್ಶಿ ಎ. ಚೆಲ್ಲಾ ಕುಮಾರ್‌, ಶಾಂತರಾಂ ನಾಯ್ಕ್‌ ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್‌ ಸದಸ್ಯರಾಗಿದ್ದಾರೆ.

ಶಿವಕುಮಾರ್‌ ಸಂತಸ: ಸಮನ್ವಯ ಸಮಿತಿ ಸದಸ್ಯ ಸ್ಥಾನ ಸಿಕ್ಕಿರುವುದರಿಂದ ಸಂತಸವಾಗಿದೆ. ಇದು ಸಚಿವ ಸ್ಥಾನಕ್ಕಿಂತಲೂ ದೊಡ್ಡ ಜವಾಬ್ದಾರಿ. ಹೈಕಮಾಂಡ್‌ ವಿಶ್ವಾಸ­ವಿಟ್ಟು ಈ ಸ್ಥಾನ ಕೊಟ್ಟಿದೆ ಎಂದು ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಕುಮಾರ್‌ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ ಮೇಲೆ ನಿರಂತರ ಒತ್ತಡ ಹೇರಿದ್ದರು. ಈಚೆಗೆ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ತಮ್ಮ ಸೋದರ ಡಿ.ಕೆ. ಸುರೇಶ್‌ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.