ADVERTISEMENT

ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು: ತಜ್ಞರ ವರದಿ

ಪಿಟಿಐ
Published 15 ಅಕ್ಟೋಬರ್ 2016, 19:30 IST
Last Updated 15 ಅಕ್ಟೋಬರ್ 2016, 19:30 IST
ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು: ತಜ್ಞರ ವರದಿ
ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು: ತಜ್ಞರ ವರದಿ   

ನವದೆಹಲಿ: ಈವರೆಗೂ ಕಾಲ್ಪನಿಕ ಎಂದು ಪರಿಗಣಿಸಲಾಗಿದ್ದ ಸರಸ್ವತಿ ನದಿ ವಾಸ್ತವವಾಗಿ ಅಸ್ತಿತ್ವದಲ್ಲಿತ್ತು ಎಂದು  ತಜ್ಞರ ಸಮಿತಿಯ ವರದಿ ಶನಿವಾರ ತಿಳಿಸಿದೆ.

‘ಹಿಮಾಲಯದಲ್ಲಿ ಮೂಲ ಹೊಂದಿದ್ದ ನದಿ ಕೊಲ್ಲಿಯಲ್ಲಿ ಪಶ್ಚಿಮದ ಸಮುದ್ರ  ಸೇರುತ್ತಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಸಮಿತಿ ನೇತೃತ್ವ ಹೊಂದಿದ್ದ ಪ್ರೊ. ಕೆ.ಎಸ್‌. ವಾಲ್ದಿಯಾ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಹರಿಯಾಣ, ರಾಜಸ್ತಾನ ಹಾಗೂ ಉತ್ತರ ಗುಜರಾತ್‌ನಲ್ಲಿ  ನದಿ ಹರಿಯುತ್ತಿತ್ತು ಎಂದು ಹಿರಿಯ ಭೂಗೋಳಶಾಸ್ತ್ರಜ್ಞರೂ ಆಗಿರುವ ವಾಲ್ದಿಯಾ ಹೇಳಿದ್ದಾರೆ.

ADVERTISEMENT

ನದಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಕವಲು ಹೊಂದಿತ್ತು. ಹಿಮಾಲಯದಲ್ಲಿ ಹುಟ್ಟುತ್ತಿದ್ದ ಸಟ್ಲೆಜ್‌ ನದಿ ಪ್ರಸ್ತುತ ಘಗ್ಗರ್‌–ಪಟಿಯಾಲಿವಾಲಿ ಕಾಲುವೆ ಮಾರ್ಗದಲ್ಲಿ ಹರಿಯುತ್ತಿತ್ತು. ಇದು ಪುರಾತನ ಕಾಲದ ಸರಸ್ವತಿ ನದಿಯ ಪಶ್ಚಿಮ ಕವಲಾಗಿತ್ತು. ಸರಸ್ವತಿ ನದಿಯ ಪೂರ್ವ ಕವಲು  ಮಾರ್ಕಂಡ ಹಾಗೂ ಸರ್ಸುತಿ (ಸರಸ್ವತಿಯ ಅಪಭ್ರಂಶ) ನದಿಯಾಗಿತ್ತು ಎಂದು ಏಳು ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿದೆ.

ವಿಶಿಷ್ಟ ಮಾರ್ಗ ಪತ್ತೆ :  ನದಿ ತನ್ನ ಪಥ ಬದಲಿಸಿದ ವಿಶಿಷ್ಟ ಕುರುಹು ಪತ್ತೆಯಾಗಿದ್ದು, ಇದು ಈಗ ಇರುವ ಘಗ್ಗರ್‌, ಸರ್ಸುತಿ , ಹಕ್ರಾ ಹಾಗೂ ನಾರಾ ನದಿಗಳ ಮಾರ್ಗಕ್ಕೆ ಸಂಬಂಧಿಸಿದ್ದು ಎಂದು ವಾಲ್ದಿಯಾ ಅವರು ವಿವರಿಸಿದ್ದಾರೆ. ಸರಸ್ವತಿ ನದಿ ಅಸ್ತಿತ್ವ ಕುರಿತು ಸಮಿತಿ ಆರು ತಿಂಗಳ ಕಾಲ ಸಂಶೋಧನೆ ನಡೆಸಿದೆ.

1700 ಪಟ್ಟಣಗಳಿಗೆ ನೀರು ಒದಗಿಸಿದ್ದ ನದಿ

ಹರಪ್ಪ ನಾಗರಿಕತೆ ಇದ್ದ ಕಾಲದಲ್ಲಿ ಈ ವಿಶಿಷ್ಟ ಮಾರ್ಗದ ಸುತ್ತಮುತ್ತ ಅಂದಾಜು 1700 ದೊಡ್ಡ ಸಣ್ಣ ಹಾಗೂ ದೊಡ್ಡ ಗ್ರಾಮ, ಪಟ್ಟಣಗಳಿದ್ದವು. 100ಕ್ಕೂ ಹೆಚ್ಚು ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದ ಕೆಲವು ಪಟ್ಟಣಗಳು ಸುಮಾರು 5500 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದವು.  ನೀರಿಲ್ಲದೆ ಈ ಪಟ್ಟಣಗಳು ಅಸ್ತಿತ್ವ ಹೊಂದಲು ಸಾಧ್ಯವಿತ್ತೆ? ಇಲ್ಲ. ಅಂದರೆ ಇಲ್ಲಿ ಹರಿಯುತ್ತಿದ್ದ ನದಿ ಗ್ರಾಮ, ಪಟ್ಟಣಗಳಿಗೆ ನೀರು ಒದಗಿಸುತ್ತಿತ್ತು. ಆ ನದಿ ಯಾವುದಾಗಿತ್ತು? ಅದರ ಹೆಸರೇನು? ಎಂಬುದನ್ನು ಪತ್ತೆ ಮಾಡಲು ನಾವು ಸಂಶೋಧನೆ ನಡೆಸಿದೆವು ಎಂದು ವಾಲ್ದಿಯಾ ಹೇಳಿದ್ದಾರೆ.

ಸರಸ್ವತಿ ನದಿ ಕುರಿತು ತಜ್ಞರ ಸಮಿತಿ ನೀಡಿರುವ ವರದಿ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ
ಉಮಾ ಭಾರತಿ
ಕೇಂದ್ರ ಜಲಸಂಪನ್ಮೂಲ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.