ರಾಯಪುರ: ನಕ್ಸಲ್ ಪೀಡಿತ ಛತ್ತೀಸ್ಗಡದ ಬಿಜಾಪುರ್ ಜಿಲ್ಲೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ನಡುವೆ ನಡೆದ ಕಾದಾಟದಲ್ಲಿ ಸಹೋದ್ಯೋಗಿಯ ಗುಂಡಿಗೆ ಇಬ್ಬರು ಸಬ್–ಇನ್ಸ್ಪೆಕ್ಟರ್ ಸೇರಿ ನಾಲ್ಕು ಜನ ಬಲಿಯಾಗಿದ್ದಾರೆ.
ಬಸಗುಡ ಸಮೀಪದ ಸಿಆರ್ಪಿಎಫ್ನ 168ನೇ ಬೆಟಾಲಿಯನ್ ಶಿಬಿರದಲ್ಲಿ ಶನಿವಾರ ಸಂಜೆ 5ಕ್ಕೆ ಯೋಧರ ನಡುವೆ ಜಗಳ ನಡೆದು ಗುಂಡು ಹಾರಿಸಲಾಗಿದೆ ಎಂದು ದಾಂತೇವಾಡಾ ವಲಯದ ಪೊಲೀಸ್ ಡಿಐಜಿ ಸುಂದರ್ರಾಜ್ ಪಿ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಾನ್ಸ್ಟೆಬಲ್ ಸನತ್ ಕುಮಾರ್ ಎಕೆ 47 ರೈಫಲ್ನಿಂದ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಎಸ್ಐ ಸೇರಿ ನಾಲ್ವರು ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಯೋಧರೊಬ್ಬರು ಗಾಯಗೊಂಡಿದ್ದಾರೆ.
ಗುಂಡಿಗೆ ಬಲಿಯಾದವರ ಪೈಕಿ ಮೂವರು ಯೋಧರು ಕಾನ್ಸ್ಟೆಬಲ್ ಸನತ್ ಕುಮಾರ್ಗಿಂತ ಸೇವಾ ಹಿರಿತನ ಹೊಂದಿದ್ದರು. ಎಸ್ಐ ವಿಕಿ ಶರ್ಮಾ, ಮೇಘ್ ಸಿಂಗ್, ಎಎಸ್ಐ ರಾಜೀವ್ ಸಿಂಗ್ ಹಾಗೂ ಕಾನ್ಸ್ಟೆಬಲ್ ಸಂಕರ ರಾವ್ ಮೃತಪಟ್ಟವರು. ಎಎಸ್ಐ ಗಜಾನಂದ್ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ರಾಯ್ಪುರಕ್ಕೆ ಸ್ಥಳಾಂತರಿಸಲಾಗಿದೆ.
ಗುಂಡು ಹಾರಿಸುವುದಕ್ಕೂ ಮುನ್ನ ಯೋಧರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.