ಅಗರ್ತಲಾ: ಕಳೆದ 20 ವರ್ಷಗಳಿಂದ ತ್ರಿಪುರಾದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಮಾಣಿಕ್ ಸರ್ಕಾರ್ ಇನ್ನು ಮುಂದೆ ಸಿಪಿಎಂ ಕಚೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಬಹುಮತ ಪಡೆದಿದೆ. ಹೀಗಾಗಿ, ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಮಾಣಿಕ್ ಸರ್ಕಾರ್ ಅವರು ತಮ್ಮ ಅಧಿಕೃತ ನಿವಾಸ ತೊರೆದು, ಗುರುವಾರ ಪಕ್ಷದ ಕಚೇರಿಗೆ ತೆರಳಿದರು.
‘ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಅವರೊಂದಿಗೆ ಕಚೇರಿಯ ಅತಿಥಿಗೃಹದಲ್ಲಿ ಒಂದು ಕೊಠಡಿಯಲ್ಲಿ ವಾಸ ಮಾಡಲಿದ್ದಾರೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿಜನ್ ಧಾರ್ ಮಾಧ್ಯಮದವರಿಗೆ ತಿಳಿಸಿದರು.
‘ಪಕ್ಷದ ಕಚೇರಿಯಲ್ಲಿ ತಯಾರಿಸುವ ಆಹಾರವನ್ನು ಸರ್ಕಾರ್ ಸೇವಿಸಲಿದ್ದಾರೆ. ಈಗಾಗಲೇ ಅವರು, ಕಚೇರಿಗೆ ಪುಸ್ತಕ, ಬಟ್ಟೆ ಹಾಗೂ ಕೆಲವು ಸಿಡಿಗಳನ್ನು ಕಳುಹಿಸಿದ್ದಾರೆ. ಹೊಸ ಸರ್ಕಾರದಿಂದ ವಸತಿಗೃಹ ದೊರೆತರೆ ಮತ್ತೆ ಅವರು ವಾಸಸ್ಥಳ ಬದಲಾಯಿಸಬಹುದು’ ಎಂದು ಪಕ್ಷದ ಕಚೇರಿ ಕಾರ್ಯದರ್ಶಿ ಹರಿಪದಾ ದಾಸ್ ಹೇಳಿದರು. ‘ಮಾರ್ಕ್ಸಿಸ್ಟ್ ಸಾಹಿತ್ಯ ಮತ್ತು ಪುಸ್ತಕಗಳನ್ನು ಪಕ್ಷದ ಕಚೇರಿ ಗ್ರಂಥಾಲಯ ಮತ್ತು ಬೀರಚಂದ್ರ ಕೇಂದ್ರ ಗ್ರಂಥಾಲಯಕ್ಕೆ ದೇಣಿಗೆ ನೀಡುತ್ತೇವೆ’ ಎಂದು ಸರ್ಕಾರ್ ಪತ್ನಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.