ನವದೆಹಲಿ (ಪಿಟಿಐ): ಜನವರಿ ಮಧ್ಯ ಭಾಗದಲ್ಲಿ ಸೇನೆಯ ಎರಡು ಪ್ರಮುಖ ವಿಭಾಗಗಳು ದೆಹಲಿಯತ್ತ ಸಾಗಿದ್ದರಲ್ಲಿ ವಿಶೇಷವೇನೂ ಇಲ್ಲ ಮತ್ತು ಇಂತಹ ತಾಲೀಮಿನ ಬಗ್ಗೆ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸುವ ಅಗತ್ಯವೂ ಇಲ್ಲ ಎಂದು ಭೂಸೇನಾ ಮುಖ್ಯಸ್ಥ ಜನರಲ್ ವಿ. ಕೆ. ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸೇನೆಯ ವಿಭಾಗಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುವುದು ಮಾಮೂಲು. ಅದನ್ನೇಕೆ ಸರ್ಕಾರಕ್ಕೆ ತಿಳಿಸಬೇಕು ಎಂದು ಮರುಪ್ರಶ್ನೆ ಹಾಕಿದ್ದಾರೆ.
ಸಿಂಗ್ ಅವರ ಹುಟ್ಟಿದ ದಿನಾಂಕದ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ರಾತ್ರಿ, ಅಂದರೆ ಜನವರಿ 16 ಮತ್ತು 17ರಂದು ಸೇನೆಯ ಎರಡು ವಿಭಾಗಗಳು ದೆಹಲಿಯತ್ತ ಸಾಗಿರುವ ವಿಚಾರವನ್ನು ಪತ್ರಿಕೆಯೊಂದು ವರದಿ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ವರದಿ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ. ಕೆ. ಅಂಟನಿ ಅವರು ಸೇನಾ ಕ್ಷಿಪ್ರ ಕ್ರಾಂತಿಯ ವರದಿಯನ್ನು `ಆಧಾರರಹಿತ~ ಎಂದು ತಳ್ಳಿಹಾಕಿದ್ದರು.
ಸೇನೆಯ ಒಂದೆರಡು ತುಕಡಿಗಳು ಸಾಗಿದ್ದನ್ನು ಇಡೀ ಸೇನೆಯೇ ರಾಜಧಾನಿಯತ್ತ ಸಾಗಿತ್ತು ಎಂಬಂತೆ ಬಿಂಬಿಸಲಾಗಿದೆ. ಜನ್ಮದಿನ ವಿವಾದದ ಬಗ್ಗೆ ನಾನೇ ನ್ಯಾಯಾಲಯದ ಮೊರೆ ಹೋಗಿದ್ದೆ. ಹೀಗಾಗಿ ಸರ್ಕಾರವನ್ನು ಬೆದರಿಸುವ ಪ್ರಶ್ನೆ ಇನ್ನೆಲ್ಲಿಂದ ಬರುತ್ತದೆ ಎಂದರು.
ಈ ಬಗ್ಗೆ ಸರ್ಕಾರ ವಿವರಣೆ ಬಯಸಿತ್ತೇ ಎಂದು ಕೇಳಿದಾಗ, `ಅದೊಂದು ಮಾಮೂಲು ಕ್ರಮವಾಗಿರುವುದರಿಂದ ವಿವರಣೆ ಕೇಳಲಿಲ್ಲ~ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.