ರಾಳೇಗಣ ಸಿದ್ಧಿ, (ಪಿಟಿಐ): ಪ್ರಬಲ ಜನಲೋಕಪಾಲ ಮಸೂದೆಗಾಗಿ ರಾಷ್ಟ್ರದ ರಾಜಧಾನಿಯಲ್ಲಿ 12ದಿನಗಳ ಉಪವಾಸ ನಡೆಸಿದ್ದ 74 ವರ್ಷದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಭಾನುವಾರ ಬೆಳಿಗ್ಗೆ ಸ್ವಗ್ರಾಮದಲ್ಲಿ ಆತ್ಮಶಾಂತಿಗಾಗಿ `ಮೌನವ್ರತ~ ಆರಂಭಿಸಿದರು.
ಗ್ರಾಮದ ಪದ್ಮಾವತಿ ದೇವಸ್ಥಾನದ ಬಳಿಯ ಆಲದ ಮರದ ಕೆಳಗೆ ಹಜಾರೆ ಕೈಗೊಂಡಿರುವ ಈ ವೃತ ಒಂದು ವಾರ ನಡೆಯಲಿದ್ದು ಕುಟೀರದಲ್ಲಿ ವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಯಾರನ್ನೂ ಭೇಟಿಯಾಗುವುದಿಲ್ಲ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹದ ಬಳಿಕ ನಿರಂತರವಾಗಿ ಜನರೊಂದಿಗೆ ಬೆರೆತಿದ್ದ ಹಜಾರೆ ದಣಿವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿತ್ತು ಎಂದು ಅವರ ಆಪ್ತರಾದ ದತ್ತಾ ಆವಾರಿ ಮತ್ತು ಸುರೇಶ ಪಥಾರೆ ಅವರು ತಿಳಿಸಿದ್ದಾರೆ. ಮೌನವೃತ ಆರಂಭವಾದ ಬಳಿಕ ಸಾವಿರಕ್ಕೂ ಹೆಚ್ಚು ಜನರು ಪದ್ಮಾವತಿ ದೇವಸ್ಥಾನ ಆವರಣಕ್ಕೆ ಭೇಟಿ ನೀಡಿದ್ದಾರೆ.
ಆರ್ಎಸ್ಎಸ್: ತೀವ್ರ ವಿಷಾದ
ಲೋಕಪಾಲ ಮಸೂದೆ ಜಾರಿ ಮತ್ತು ಭ್ರಷ್ಟಚಾರ ವಿರೋಧಿಸಿ ನಡೆದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಆರ್ಎಸ್ಎಸ್ ಬರೆದ ಪತ್ರವನ್ನು ತಮ್ಮ ವಿರುದ್ಧದ `ಅಪಪ್ರಚಾರದ ಸಂಚು~ ಎಂದು ಆರೋಪಿಸಿದ ಅಣ್ಣಾ ಪ್ರತಿಕ್ರಿಯೆಗೆ ಆರ್ಎಸ್ಎಸ್ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಹೋರಾಟ ಬೆಂಬಲಿಸಿ ಬರೆದ ಪತ್ರವನ್ನು ಅಣ್ಣಾ ಅವರಂತಹ ವ್ಯಕ್ತಿ ಒಂದು ಸಂಚು ಎಂದು ಭಾವಿಸಿರುವುದು ತೀವ್ರ ನೋವನ್ನುಂಟು ಮಾಡಿದೆ. ಕ್ಷುಲ್ಲಕ ರಾಜಕೀಯ ಸಂಚಿಗೆ ಒಳಗಾಗಿ ಅವರು ಈ ರೀತಿ ಹೇಳಿರುವುದು ವಿಷಾದನೀಯ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಜೋಶಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.