ಅಹಮದಾಬಾದ್: ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ಗೆ ಬೆಂಬಲ ಘೋಷಿಸಿರುವುದನ್ನು ನೋಡಿದರೆ ಅವರಿಬ್ಬರ ನಡುವೆ ಒಳ ಒಪ್ಪಂದ ನಡೆದಂತೆ ಕಾಣುತ್ತದೆ ಎಂದು ಹಾರ್ದಿಕ್ ಆಪ್ತ ಮತ್ತು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ (ಪಿಎಎಎಸ್) ಹಿರಿಯ ಮುಖಂಡರಾಗಿದ್ದ ದಿನೇಶ್ ಭಂಬಾನಿಯಾ ಆರೋಪಿಸಿದ್ದಾರೆ.
ದಿನೇಶ್ ಶುಕ್ರವಾರ ಸಮಿತಿಗೆ ರಾಜೀನಾಮೆ ನೀಡಿದ್ದರು.
‘ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದರೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಲ್ಲಿ ನಮಗೆ ಹೇಗೆ ಮೀಸಲಾತಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟನೆ ನೀಡಿಲ್ಲ. ನಮಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ಗೆ ಯಾವತ್ತೂ ಇಷ್ಟವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಹಾಗಿದ್ದರೂ ಹಾರ್ದಿಕ್ ಪಟೇಲ್ ಆ ಪಕ್ಷದ ಪರವಾಗಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಈ ವಿಚಾರದ ಬಗ್ಗೆ ಹಾರ್ದಿಕ್ ಮೌನವಾಗಿದ್ದಾರೆ. ಹಾಗಾಗಿ, ಇದೊಂದು ಒಳ ಒಪ್ಪಂದದ ರೀತಿ ನನಗೆ ಕಾಣಿಸುತ್ತದೆ. ನಾವು ಹೋರಾಡುತ್ತಿರುವುದು ಒಂದು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಅಲ್ಲ. ಯಾವುದೇ ಪಕ್ಷದ ಏಜೆಂಟ್ ಆಗಲು ನಾನು ಬಯಸುವುದಿಲ್ಲ. ಹಾರ್ದಿಕ್ ಅವರು ಮೀಸಲಾತಿ ಹೋರಾಟವನ್ನು ರಾಜಕೀಯಗೊಳಿಸಬಾರದು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.