ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಮುಂಬೈ (ಐಎಎನ್‌ಎಸ್): ಪೆಟ್ರೋಲ್ ಕಲಬೆರಕೆ ಮಾಫಿಯಾಗಳ ಮೇಲೆ ದಾಳಿ ನಡೆಸಲು ತೆರಳಿದ್ದ  ಮಾಲೆಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ ಅವರನ್ನು ಹಾಡಹಗಲೇ ಸಜೀವವಾಗಿ ಸುಟ್ಟು ಹಾಕಿದ ಬರ್ಬರ ಘಟನೆ ಇಲ್ಲಿಂದ 260 ಕಿ.ಮೀ. ದೂರದ ಮನ್‌ಮಾಡ್‌ನ ಪಾನೇವಾಡಿಯಲ್ಲಿ ನಡೆದಿದೆ.
 
42ರ ಹರೆಯದ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿದ್ದ ಸೋನಾವಾನೆ ಅವರು, ತಮ್ಮ ಆಪ್ತ  ಸಹಾಯಕ ಮತ್ತು ಚಾಲಕನ ಜತೆ ತೆರಳಿದಾಗ  ಪಾನೇವಾಡಿಯ ಸಾಗರ್ ಢಾಬಾದ ಬಳಿ ಬೆಚ್ಚಿಬೀಳಿಸುವ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಶಂಕಿತ ಪ್ರಮುಖ ಆರೋಪಿ ಪೋಪತ್ ಶಿಂಧೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ಮಹಾ ನಿರ್ದೇಶಕ ಕೆ. ಪಿ. ರಘುವಂಶಿ ಅವರ ಪ್ರಕಾರ, ತೈಲ ಟ್ಯಾಂಕರ್‌ನಿಂದ ತೈಲ ಕದಿಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸೋನಾವಾನೆ ಪ್ರಶ್ನಿಸಿದಾಗ ಆತ ಅಲ್ಲಿಂದ ಪರಾರಿಯಾದ. ಕೂಡಲೇ ಸೋನಾವಾನೆ ಅವರು ವಿತರಣಾ ಅಧಿಕಾರಿಯನ್ನು ಸ್ಥಳಕ್ಕೆ ಬಂದು ತನಿಖೆ ನಡೆಸುವಂತೆ ತಿಳಿಸಿದರು. ಅಷ್ಟರಲ್ಲಿ ಮೋಟಾರ್‌ಸೈಕಲ್‌ಗಳಲ್ಲಿ ಅಲ್ಲಿಗೆ ಬಂದ ಕೆಲವರು ಸೋನಾವಾನೆ ಅವರ ಮೇಲೆ ಹಲ್ಲೆ ನಡೆಸಲು ಆರಂಭಿಸಿದರಲ್ಲದೆ ಗುಂಪಿನಲ್ಲಿದ್ದ ಶಿಂಧೆ ತನ್ನ ಪುತ್ರ ಮತ್ತು ಇತರರ ಸಹಾಯದಿಂದ ಸೋನಾವಾನೆ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದನೆನ್ನಲಾಗಿದೆ.

ಮನ್‌ಮಾಡ್‌ನ ತೈಲ ಕೇಂದ್ರಗಳ ಮೇಲೆ ಸೋನಾವಾನೆ ಅವರು ಕಂದಾಯ ಅಧಿಕಾರಿಗಳೊಂದಿಗೆ ಕಳೆದ ರಾತ್ರಿ ದಾಳಿ ನಡೆಸಿದ್ದರಿಂದ ಮಾಫಿಯಾಗಳು ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ಎಂದು ನಾಸಿಕ್ ಪೊಲಿಸರು ತಿಳಿಸಿದ್ದಾರೆ.ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ‘ತನ್ನ ಸರ್ಕಾರ ಇಂಥ ಹೇಯ ಘಟನೆಗಳನ್ನು ಸಹಿಸುವುದಿಲ್ಲ, ಅಪರಾಧಿಗಳಿಗೆ ಕಠಿಣ ಶಿಕ್ಷೆಯ ನೀಡಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.