ADVERTISEMENT

‘ಲೆ. ಗವರ್ನರ್‌ರಿಂದ ಎಲ್ಲ ಸಾಧ್ಯತೆ ಪರಿಶೀಲನೆ’

ದೆಹಲಿ: ಹೊಸ ಸರ್ಕಾರ ರಚನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ನವದೆಹಲಿ: ದೆಹಲಿಯಲ್ಲಿ ಹೊಸ ಸರ್ಕಾರ ರಚನೆಗೆ  ಆಹ್ವಾನ ನೀಡು­ವುದಕ್ಕೂ ಮೊದಲು ಈ ಕುರಿತ ಎಲ್ಲ ಸಾಧ್ಯತೆಗಳ ಬಗ್ಗೆ ಲೆಫ್ಟಿನಂಟ್‌ ಗವ­ರ್ನರ್‌ ಅವರು ಪರಿಶೀಲನೆ ನಡೆಸ­ಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರು ಸೋಮವಾರ ತಿಳಿಸಿದರು.

‘ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಸರಳ ಬಹುಮತ ದೊರ­ಕದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಷ್ಟ್ರ­ಪತಿ ಆಡಳಿತ ಜಾರಿ ಮಾಡಲಾಗುವುದೇ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಮಿತ್ರ ಪಕ್ಷ ಅಕಾಲಿ ದಳದ ಒಬ್ಬರು ಸೇರಿದಂತೆ 32 ಹೊಸ ಶಾಸಕರನ್ನು ಬಿಜೆಪಿ ಹೊಂದಿದೆ. ಸರಳ ಬಹುಮತಕ್ಕೆ ಇನ್ನೂ ನಾಲ್ವರ ಬೆಂಬಲ ಅಗತ್ಯವಿದೆ.

ಬಹುಮತದ ಕೊರತೆಯ ಕಾರಣ ಬಿಜೆಪಿ ಏನಾದರೂ ಸರ್ಕಾರ ರಚಿಸಲು ಮುಂದಾಗದಿದ್ದರೆ ನಂತರ ಲೆಫ್ಟಿನೆಂಟ್‌ ಗವರ್ನರ್‌ ಅವರು, ಎರಡನೇ ಅತಿ ದೊಡ್ಡ ಪಕ್ಷವಾಗಿರುವ (28 ಸ್ಥಾನಗಳು) ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಸರ್ಕಾರ ರಚಿಸಲು ಆಹ್ವಾನ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಸಾಧ್ಯತೆಗಳು: ಅತಿ ದೊಡ್ಡ ಪಕ್ಷವಾಗಿ   ಹೊರ­ಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅವರು ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಒಂದು ವೇಳೆ ಈ ಪಕ್ಷಗಳು ಸರ್ಕಾರ ರಚನೆಗೆ ಮುಂದಾಗದಿದ್ದರೆ ಆಗ ಲೆಫ್ಟಿನೆಂಟ್‌ ಗವರ್ನರ್‌ ಅವರು ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಡಾ. ಹರ್ಷವರ್ಧನ್‌ ಮತ್ತು ಎಎಪಿ ಮುಖಂಡ ಅರವಿಂದ ಕೇಜ್ರಿ­ವಾಲ್‌ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಈ ಮಾತುಕತೆಯ ನಂತರ ಲೆಫ್ಟಿನೆಂಟ್‌ ಗವರ್ನರ್‌ ಅವರು ಗೃಹ ಸಚಿವಾಲಯಕ್ಕೆ ವರದಿ ಕಳುಹಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.

ಈ ಶಿಫಾರಸನ್ನು ಗೃಹ ಸಚಿವಾ­ಲಯವು ಸಂಪುಟದ ಮುಂದೆ ಪ್ರಸ್ತಾಪಿ­ಸಲಿದೆ. ಇದು ಸಮಂಜಸವಾ­ಗಿದ್ದರೆ ಆಗ ಸಂಪುಟವು ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ರಾಷ್ಟ್ರಪತಿ­ಗಳಿಗೆ ಶಿಫಾರಸು ಮಾಡಿ, ದೆಹಲಿ ವಿಧಾನಸಭೆ­ಯನ್ನು ಅಮಾನತಿನಲ್ಲಿ ಇರಿಸುವ ಸಾಧ್ಯತೆಯೂ ಇದೆ.

‘ಗೃಹ ಇಲಾಖೆ ಪಾತ್ರವಿಲ್ಲ’
‘ದೆಹಲಿಯಲ್ಲಿ ಹೊಸ ಸರ್ಕಾರ ರಚನೆ ವಿಚಾರದಲ್ಲಿ ಸದ್ಯಕ್ಕೆ ಗೃಹ ಸಚಿ­ವಾಲಯದ ಪಾತ್ರ ಏನೂ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.