ADVERTISEMENT

ರಾಜಸ್ಥಾನ: ಗೋಶಾಲೆಯೊಳಗೆ ಮಳೆ ನೀರು ನುಗ್ಗಿ 10 ಹಸುಗಳು ಸಾವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 11:22 IST
Last Updated 5 ಆಗಸ್ಟ್ 2018, 11:22 IST
ಫೋಟೊ ಕೃಪೆ: ಹಿಂದೂಸ್ತಾನ್ ಟೈಮ್ಸ್
ಫೋಟೊ ಕೃಪೆ: ಹಿಂದೂಸ್ತಾನ್ ಟೈಮ್ಸ್   

ಭರತ್‍ಪುರ್ : ರಾಜಸ್ಥಾನದ ಭರತ್‍ಪುರ್ ಎಂಬಲ್ಲಿರುವ ಗೋಶಾಲೆಯಲ್ಲಿ ಮಳೆ ನೀರು ನುಗ್ಗಿ 10 ಹಸುಗಳು ಸಾವಿಗೀಡಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.ಕಳೆದ ಒಂದು ವಾರದಲ್ಲಿ ನಾಲ್ಕು ಹಸುಗಳು ಸಾವನ್ನಪ್ಪಿದೆ ಎಂದು ಇಲ್ಲಿನ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಹೇಳಿದ್ದಾರೆ.

ಹಸುಗಳ ರಕ್ಷಣೆಗಾಗಿ ನಿರ್ಮಿಸಿದ ತಾತ್ಕಾಲಿಕ ಶೆಡ್‍ನೊಳಗೆ ಮಳೆ ನೀರು ನುಗ್ಗಿ ಹಸುಗಳು ಸಾವಿಗೀಡಾಗಿರುವ ವಿಷಯ ನನ್ನ ಗಮನಕ್ಕೆ ಬಂದದ್ದು ಶುಕ್ರವಾರ.ಶೆಡ್‍ನ್ನು ಶುಚಿಗೊಳಿಸಿ ಇನ್ನುಳಿದಿರುವ ಹಸುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ನಾನು ನೈರ್ಮಲ್ಯ ಇಲಾಖೆಗೆ ಸೂಚಿಸಿದ್ದೇನೆ ಎಂದು ಭರತ್‍ಪುರ್ ಮುನ್ಸಿಪಲ್ ಕಾರ್ಪೊರೇಶನ್ ಕಮಿಷನರ್ ರಾಜೇಶ್ ಗೋಯಲ್ ಹೇಳಿದ್ದಾರೆ.

ಕಳೆದ ಒಂದು ವಾರದಲ್ಲಿ ನಾಲ್ಕು ಹಸುಗಳು ಸತ್ತಿವೆ ಎಂದು ಕಾರ್ಪೊರೇಶನ್‍ನ ನೈರ್ಮಲ್ಯ ಇಲಾಖೆಯ ಮುಖ್ಯ ಪರಿಶೋಧಕ ಸಂಜಯ್ ಕುಮಾರ್ ಹೇಳಿದ್ದಾರೆ. ಆದರೆ ಶೆಡ್‍ನೊಳಗೆ ಕೆಸರು ತುಂಬಿಕೊಂಡ ಕಾರಣ ದಿನಕ್ಕೆ ಎರಡು ಹಸುಗಳು ಸಾಯುತ್ತಿದ್ದು ಇಲ್ಲಿಯವರೆಗೆ ಒಟ್ಟು 10 ಹಸುಗಳು ಸಾವಿಗೀಡಾಗಿದೆ ಎಂದು ಶೆಡ್‍ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ADVERTISEMENT

ಪ್ರತಿದಿನ ಹಸುಗಳು ಸಾಯುತ್ತಿವೆ.ಆದರೆ ಇಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಶೆಡ್ ಹತ್ತಿರ ವಾಸಿಸುತ್ತಿರುವ ಮಂಜು ಲತಾ ಎಂಬವರು ಹೇಳಿದ್ದಾರೆ.ಪ್ರತಿದಿನ ಕೆಸರಿನಿಂದ ಹಸುವಿನ ಕಳೇಬರವನ್ನು ಎಳೆದು ಹೊಕ ಹಾಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ ಅವರು.

ಆಗಸ್ಟ್ 2016ರಲ್ಲಿ ಜೈಪುರ ನಗರದ ಹೊರವಲಯದಲ್ಲಿರುವ ಹಿಂಗೊನಿಯಾ ಗೋಶಾಲೆಯಲ್ಲಿ ಎರಡು ವಾರಗಳಲ್ಲಿ 500ಕ್ಕಿಂತಲೂ ಹೆಚ್ಚು ಹಸುಗಳು ಸತ್ತದ್ದು ಸುದ್ದಿಯಾಗಿತ್ತು.

ಭರತ್‍ಪುರದಲ್ಲಿರುವ ಈ ಗೋಶಾಲೆಯನ್ನು ಪಶು ಸಂಗೋಪನಾ ಇಲಾಖೆ, ನಗರಾಭಿವೃದ್ಧಿ ಟ್ರಸ್ಟ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಕಳೆದ ಜೂನ್ ತಿಂಗಳಲ್ಲಿ ನಿರ್ಮಿಸಿತ್ತು.ಈಗ ಈ ಶೆಡ್‍ನಲ್ಲಿ200 ಹಸುಗಳಿವೆ ಎಂದು ಕಾರ್ಪೊರೇ ಶನ್ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.