ADVERTISEMENT

ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಪೈಪೋಟಿ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ಐಎಎನ್ಎಸ್
Published 20 ಮಾರ್ಚ್ 2022, 7:33 IST
Last Updated 20 ಮಾರ್ಚ್ 2022, 7:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾನ್ಪುರ: ಇತ್ತೀಚೆಗಷ್ಟೇ ಪ್ರಕಟಗೊಂಡ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶದ ಪೈಪೋಟಿಗೆ ಸಂಬಂಧಿಸಿದಂತೆ ನಡೆದ ಗುಂಪು ಘರ್ಷಣೆಯಲ್ಲಿ 12 ಜನರು ಗಾಯಗೊಂಡಿದ್ದಾರೆ.

ಬಿತ್ತೂರಿನ ಗಂಭೀರಪುರ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ಏರ್ಪಟ್ಟು, ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಫೈರಿಂಗ್ ಕೂಡ ಮಾಡಿದ್ದಾರೆ.

ಗಂಭೀರಪುರದ ನಿವಾಸಿಯಾದ ರಾಮ ಚಂದ್ರ ಎಂಬುವವರು ಧರ್ಮೇಂದ್ರ ಎಂಬುವರ ವಿರುದ್ಧ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು.

ADVERTISEMENT

ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಗುಂಪುಗಳು ಬೇರೆ ಬೇರೆ ರಾಜಕೀಯ ಪಕ್ಷವನ್ನು ಬೆಂಬಲಿಸಿದ್ದರು. ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಎರಡು ಗುಂಪುಗಳನ ನಡುವೆ ಘರ್ಷಣೆ ಆರಂಭವಾಗಿದೆ. ಕೂಡಲೇ ಎರಡೂ ಕಡೆಯವರು ಲಾಠಿ, ಕೋಲುಗಳು ಮತ್ತು ಚೂಪಾದ ಆಯುಧಗಳೊಂದಿಗೆ ಜಮಾಯಿಸಿ ಪರಸ್ಪರ ದಾಳಿ ನಡೆಸಿದ್ದಾರೆ. ಇದರಲ್ಲಿ ಕೆಲವರು ಫೈರಿಂಗ್ ಕೂಡ ಮಾಡಿದ್ದಾರೆ ಎಂದು ಗ್ರಾಮದ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಧರ್ಮೇಂದ್ರರ ಕಡೆಯ ನಾಲ್ವರು ಮತ್ತು ರಾಮ ಚಂದ್ರ ಅವರ ಕಡೆಯ 8 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿತ್ತೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂಜಯ್ ಪಾಂಡೆ ಮಾತನಾಡಿ, ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.