ADVERTISEMENT

ಲಾಕ್‌ಡೌನ್: 3 ದಿನ ನಡೆದು ಮನೆ ತಲುಪುವ 1 ಗಂಟೆಗೂ ಮುನ್ನ ಮೃತಪಟ್ಟ ಬಾಲಕಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 6:43 IST
Last Updated 21 ಏಪ್ರಿಲ್ 2020, 6:43 IST
ಮೂರು ದಿನ ಕಾಲ್ನಡಿಗೆಯಲ್ಲೇ ತೆರಳಿ ಮೃತಪಟ್ಟ ಬಾಲಕಿ
ಮೂರು ದಿನ ಕಾಲ್ನಡಿಗೆಯಲ್ಲೇ ತೆರಳಿ ಮೃತಪಟ್ಟ ಬಾಲಕಿ   

ಬಿಜಾಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್ ವಿಸ್ತರಿಸಿರುವುದರಿಂದಾಗಿ ಹತಾಶನಾಗಿ ತೆಲಂಗಾಣದಿಂದ ಛತ್ತೀಸಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲೇ 150 ಕಿ.ಮೀ ಪ್ರಯಾಣ ಮಾಡಿದ 12 ವರ್ಷದ ಬಾಲಕಿ ಇನ್ನೇನು ಮನೆ ತಲುಪಲು ಒಂದು ಗಂಟೆ ನಡೆಯಬೇಕಿದೆ ಎನ್ನುವಾಗಲೇ ಮೃತಪಟ್ಟಿದ್ದಾಳೆ.

ತನ್ನ ಕುಟುಂಬಕ್ಕೆನೆರವಾಗಲು ಮೆಣಸಿನಕಾಯಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜಾಮ್ಲೋ ಮಕ್ಡಾಮ್ ಎಂಬಾಕೆ ತನ್ನ ಹಳ್ಳಿಯಿಂದ ಕೇವಲ ಒಂದು ಗಂಟೆ ದೂದಲ್ಲಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ತೆಲಂಗಾಣದ ಗ್ರಾಮವೊಂದರ ಹೊಲದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಇತರೆ 11 ಜನರೊಂದಿಗೆ ಏಪ್ರಿಲ್ 15ರಂದು ಸುದೀರ್ಘ ಪ್ರಯಾಣವನ್ನು ಬಾಲಕಿ ಶುರುಮಾಡಿದ್ದಳು. ಹೆದ್ದಾರಿಗಳನ್ನು ತಪ್ಪಿಸಿ ಕಾಡುಗಳಲ್ಲೇ ತನ್ನ ತಂಡದೊಂದಿಗೆ ಮೂರು ದಿನ ನಿರಂತರವಾಗಿ ಪ್ರಯಾಣ ಮಾಡಿದ್ದಳು.

ADVERTISEMENT

ಶನಿವಾರ ಮಧ್ಯಾಹ್ನದ ವೇಳೆಗೆ ಆಕೆಯ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆಗ ಆಕೆ ಮನೆಯಿಂದ 14 ಕಿ.ಮೀ ದೂರದಲ್ಲಿದ್ದಳು. ಕೊನೆಗೆ ಆಕೆಯ ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕೊಂಡೊಯ್ಯಲಾಗಿದೆ.

ಆಕೆ ತೀವ್ರವಾದ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. 'ಬಾಲಕಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಿದ್ದು, ಸೋಂಕು ತಗುಲಿಲ್ಲ.ಆಕೆಯ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಅಸಮತೋಲವಾಗಿರಬಹುದು' ಎಂದು ಜಿಲ್ಲಾ ಹಿರಿಯ ವೈದ್ಯಕೀಯ ಅಧಿಕಾರಿ ಬಿ.ಆರ್.ಪುಜಾರಿ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ದಿನಗಳು ನಡೆದಿದ್ದಾಳೆ. ಇದರಿಂದಾಗಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಬಾಲಕಿಯ ತಂದೆ ಅಂಡೋರಾಂ ಮಡ್ಕಾಮ್ ತಿಳಿಸಿದ್ದಾರೆ. ಬಾಲಕಿ ಸರಿಯಾಗಿ ತಿಂದಿರಲಿಲ್ಲ ಎಂದು ತಂಡದಲ್ಲಿದ್ದವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಬಾಲಕಿಯ ಕುಟುಂಬಕ್ಕೆ ₹1 ಲಕ್ಷ ಹಣವನ್ನು ಘೋಷಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ದೂರ ಉಳಿದು ಉದ್ಯೋಗ ಮತ್ತು ಆಶ್ರಯವಿಲ್ಲದಿರುವ ಸಾವಿರಾರು ವಲಸೆ ಕಾರ್ಮಿಕರು ಹತಾಶೆಯಿಂದ ಕಾಲ್ನಡಿಗೆಯಲ್ಲಿಯೇ ಸುದೀರ್ಘ ಪ್ರಯಾಣಕ್ಕೆ ಪ್ರಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.