ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: 14 ಮಂದಿ ಪರ್ವತಾರೋಹಿಗಳ ರಕ್ಷಣೆ

ಪಿಟಿಐ
Published 5 ಅಕ್ಟೋಬರ್ 2022, 15:18 IST
Last Updated 5 ಅಕ್ಟೋಬರ್ 2022, 15:18 IST
ಉತ್ತರಾಖಂಡದ ದ್ರೌಪದಿ ಕಾ ದಂಡ ಶಿಖರದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ನಾಪತ್ತೆಯಾದ ಪರ್ವತಾರೋಹಿಗಳನ್ನು ರಕ್ಷಿಸಲು ಸನ್ನದ್ಧವಾಗುತ್ತುರುವ ರಕ್ಷಣಾ ಪಡೆಗಳು –ಪಿಟಿಐ ಚಿತ್ರ
ಉತ್ತರಾಖಂಡದ ದ್ರೌಪದಿ ಕಾ ದಂಡ ಶಿಖರದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ನಾಪತ್ತೆಯಾದ ಪರ್ವತಾರೋಹಿಗಳನ್ನು ರಕ್ಷಿಸಲು ಸನ್ನದ್ಧವಾಗುತ್ತುರುವ ರಕ್ಷಣಾ ಪಡೆಗಳು –ಪಿಟಿಐ ಚಿತ್ರ   

ಡೆಹ್ರಾಡೂನ್‌/ಉತ್ತರಕಾಶಿ: ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡ ಶಿಖರದಲ್ಲಿ ಮಂಗಳವಾರ ಸಂಭವಿಸಿದ ಹಿಮಪಾತದಿಂದಾಗಿ ನಾಪತ್ತೆಯಾಗಿದ್ದ ಪರ್ವತಾರೋಹಿಗಳ ತಂಡದ 14 ಮಂದಿಯನ್ನು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಸಹಾಯದಿಂದ‌ ಬುಧವಾರ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಉತ್ತರಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿರಿಂಗ್‌ನಲ್ಲಿ (ಎನ್‌ಐಎಂ) ಪರ್ವತಾರೋಹಣ ತರಬೇತಿ ಪಡೆಯುತ್ತಿದ್ದ 41 ಮಂದಿಯ ತಂಡವು ಮಂಗಳವಾರ ಬೆಳಿಗ್ಗೆ ಪರ್ವತಾರೋಹಣ ಅಭ್ಯಾಸ ನಡೆಸುತ್ತಿದ್ದಾಗ ಹಠಾತ್ತನೇ ಹಿಮಪಾತ ಉಂಟಾದ ಕಾರಣ ಶಿಬಿರಾರ್ಥಿಗಳು ಹಾಗೂ ಬೋಧಕರು ನಾಪತ್ತೆಯಾಗಿದ್ದರು.

ಶಿಬಿರಾರ್ಥಿಗಳಲ್ಲಿಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ, ತಮಿಳುನಾಡು, ಅಸ್ಸಾಂ, ಹರಿಯಾಣ, ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ಮೂಲದವರೂ ಇದ್ದಾರೆ.

ADVERTISEMENT

‘ಹಿಮಪಾತದಲ್ಲಿ ಸಿಲುಕಿಕೊಂಡವರಲ್ಲಿ ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದುಎನ್‌ಐಎಂ ಪ್ರಾಂಶುಪಾಲ ಕರ್ನಲ್‌ ಅಮಿತ್‌ ಬಿಷ್ಟ್‌ ಹೇಳಿದ್ದಾರೆ.

ಹಿಮಪಾತದಿಂದಾಗಿ ನಾಪತ್ತೆಯಾದ ಪರ್ವತಾರೋಹಿ ಶಿಬಿರಾರ್ಥಿಗಳ 28 ಹೆಸರುಗಳನ್ನು ಉತ್ತರಾಖಂಡದ ಪೊಲೀಸರು ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ.

ಭಟ್ವಾರಿಯ ಉಪ ವಿಭಾಗಾಧಿಕಾರಿ ಚಟ್ಟರ್‌ ಸಿಂಗ್‌ ಚೌಹಾನ್‌ ಅವರು, ‘ರಕ್ಷಣೆ ಮಾಡಲಾದ 14 ಮಂದಿಯಲ್ಲಿ ಆರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಮಾಲ್ಟಿಗೆ ವಿಮಾನದ ಮೂಲಕ ಸಾಗಿಸಲಾಗಿದೆ. ಉಳಿದ ಎಂಟು ಮಂದಿ ಆರೋಗ್ಯವಾಗಿದ್ದು, ಅವರನ್ನು ಎನ್‌ಐಎಂಗೆ ಮರಳಿ ಕಳುಹಿಸಲಾಗಿದೆ’ ಎಂದು ಹೇಳಿದರು.

‘ಹಿಮಪಾತದಿಂದ ರಕ್ಷಣೆ ಮಾಡಲಾದ 14 ಮಂದಿಯಲ್ಲಿ 10 ಮಂದಿ ಶಿಬಿರಾರ್ಥಿಗಳಾದರೆ, ಉಳಿದ ನಾಲ್ಕು ಮಂದಿ ಬೊಧಕರಾಗಿದ್ದಾರೆ. ಉಳಿದವರಿಗಾಗಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಐಟಿಪಿಬಿ ಮತ್ತು ಎನ್‌ಐಎಮ್‌ ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.