ADVERTISEMENT

ಮೀನುಗಾರಿಕಾ ದೋಣಿಗಳನ್ನು ಏರಿ ಭಾರತದತ್ತ ಬರುತ್ತಿರುವ ಶ್ರೀಲಂಕಾ ನಿರಾಶ್ರಿತರು

ಐಎಎನ್ಎಸ್
Published 22 ಏಪ್ರಿಲ್ 2022, 11:15 IST
Last Updated 22 ಏಪ್ರಿಲ್ 2022, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಮೇಶ್ವರ: ಶ್ರೀಲಂಕಾದ ತಮಿಳು ನಿರಾಶ್ರಿತರ ತಂಡವೊಂದು ಗುರುವಾರ ರಾತ್ರಿ ಕರಾವಳಿ ನಗರ ರಾಮೇಶ್ವರಕ್ಕೆ ಬಂದು ತಲುಪಿದೆ. 18 ಜನರ ಈ ತಂಡದಲ್ಲಿ ಗರ್ಭಿಣಿಯೂ ಇದ್ದರು. ಇದರೊಂದಿಗೆ ಶ್ರೀಲಂಕಾ ತೊರೆದು ಭಾರತಕ್ಕೆ ಬಂದು ಸೇರಿದ ನಿರಾಶ್ರಿತರ ಸಂಖ್ಯೆ 60ಕ್ಕೆ ತಲುಪಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಜನ ತಮ್ಮನ್ನು ರಕ್ಷಿಸಿಕೊಳ್ಳಲು ದೇಶ ತೊರೆಯುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ಶ್ರೀಲಂಕಾದಿಂದ ಎಂಟು ತಂಡಗಳಲ್ಲಿ 60 ಮಂದಿ ರಾಮೇಶ್ವರಕ್ಕೆ ಬಂದಿದ್ದಾರೆ. ಎಲ್ಲರೂ ಮನ್ನಾರ್ ಕೊಲ್ಲಿವರಾಗಿದ್ದು, ಸಣ್ಣಪುಟ್ಟ ಮೀನುಗಾರಿಕಾ ದೋಣಿಗಳನ್ನು ನಂಬಿ ಕಡಲು ದಾಟಿ ಭಾರತಕ್ಕೆ ಬಂದಿದ್ದಾರೆ.

ADVERTISEMENT

ರಾಮೇಶ್ವರಕ್ಕೆ ಬಂದ 18 ಜನರ ತಂಡ ಎರಡು ಸಣ್ಣ ದೋಣಿಯ ಮೂಲಕ ಗುರುವಾರ ಬೆಳಗ್ಗೆಯೇ ಮನ್ನಾರ್‌ ಕೊಲ್ಲಿ ತೊರೆದಿತ್ತು. ಎರಡು ತಂಡಗಳು ಗುರುವಾರ ರಾತ್ರಿಹೊತ್ತಿಗೆ ರಾಮೇಶ್ವರಕ್ಕೆ ಬಂದು ತಲುಪಿವೆ ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ.

ಎಲ್ಲಾ 18 ಜನರನ್ನು ಕರಾವಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಯಿತು. ನಂತರ ಮಂಡಪಂ ನಿರಾಶ್ರಿತರ ಶಿಬಿರದಲ್ಲಿ ಅವರನ್ನು ಇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಜಾಫ್ನಾದ ತಮಿಳರ ಮತ್ತೊಂದು ಗುಂಪು ಕೂಡ ಭಾರತದತ್ತ ಹೊರಟಿದೆ ಎಂದು ಕರಾವಳಿ ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.