ADVERTISEMENT

ಗುಜ್ರಾಲ್ ಮಾತು ಕೇಳಿದ್ದಿದ್ದರೆ 1984 ಹತ್ಯಾಕಾಂಡ ತಪ್ಪುತ್ತಿತ್ತು:ಮನಮೋಹನ್ ಸಿಂಗ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 8:38 IST
Last Updated 5 ಡಿಸೆಂಬರ್ 2019, 8:38 IST
ಮನಮೋಹನ್ ಸಿಂಗ್
ಮನಮೋಹನ್ ಸಿಂಗ್    

ನವದೆಹಲಿ:1984ರಲ್ಲಿ ಗೃಹ ಸಚಿವರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಐ.ಕೆ. ಗುಜ್ರಾಲ್ ಅವರ ಮಾತು ಕೇಳಿದ್ದಿದ್ದರೆ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ದಿವಂಗತ ಗುಜ್ರಾಲ್ ಅವರ 100ನೇ ಜನ್ಮದಿನಾಚರಣೆ ಗುರುವಾರ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಸಿಂಗ್, ಗುಜ್ರಾಲ್ ಜತೆಗಿನ ನಂಟನ್ನು ಸ್ಮರಿಸಿದ್ದಾರೆ.

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದಾಗ ಗುಜ್ರಾಲ್ ತುಂಬಾ ಬೇಸರದಲ್ಲಿದ್ದರು. ಅವರು ಗೃಹ ಸಚಿವ ಪಿ.ವಿ ನರಸಿಂಹ ರಾವ್ ಬಳಿ ಹೋಗಿ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಆದಷ್ಟು ಬೇಗ ಸೇನೆಯನ್ನು ಕರೆಯಿರಿ ಎಂದಿದ್ದರು. ರಾವ್ ಅವರು ಗುಜ್ರಾಲ್ ಮಾತು ಕೇಳಿದ್ದರೆ 1984ರ ಸಿಖ್ ಹತ್ಯಾಕಾಂಡ ತಪ್ಪಿಸಬಹುದಾಗಿತ್ತು ಎಂದಿದ್ದಾರೆ ಮನಮೋಹನ್ ಸಿಂಗ್.

ನಾನು ಮತ್ತು ಗುಜ್ರಾಲ್ ಪಾಕಿಸ್ತಾನದ ನಿರಾಶ್ರಿತರಾಗಿ ಬಂದು ದೇಶದ ಪ್ರಧಾನಿ ಸ್ಥಾನಕ್ಕೇರಿದವರು. ನಾನು ಮತ್ತು ಅವರುಪಾಕಿಸ್ತಾನದ ಜೀಲಂ ಜಿಲ್ಲೆಯವರಾಗಿದ್ದು, ಪ್ರಧಾನಿಯಾಗುವವರೆಗೆ ನಾವಿಬ್ಬರೂ ಜತೆಯಾಗಿ ಪಯಣಿಸಿದವರು ಎಂದು ಸಿಂಗ್ ತಮ್ಮ ಗೆಳೆತನದ ಬಗ್ಗೆ ಹೇಳಿದ್ದಾರೆ.

1919 ಡಿಸೆಂಬರ್ 4 ರಂದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ ಗುಜ್ರಾಲ್ 1931ರಿಂದ ಸ್ವಾತಂತ್ರ್ಯಹೋರಾಟದಲ್ಲಿ ಸಕ್ರಿಯವಾಗಿದ್ದರು.1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಮಾಡಿದ್ದರು.ಭಾರತದ 12ನೇ ಪ್ರಧಾನಿಯಾದ ಅವರು ರಾಜ್ಯಸಭೆಯಿಂದ ಪ್ರಧಾನಿ ಸ್ಥಾನಕ್ಕೆ ಚುನಾಯಿತರಾದ ಮೂರನೇ ಪ್ರಧಾನಿಯಾಗಿದ್ದಾರೆ.

ಇದನ್ನೂ ಓದಿ:ದ್ವೇಷ ಬಿಡಿ, ಆರ್ಥಿಕತೆಯತ್ತ ದೃಷ್ಟಿ ನೆಡಿ: ಮನಮೋಹನ್‌ ಸಿಂಗ್‌ ಸಲಹೆ

ಗುಜ್ರಾಲ್ ಅವರಿಗೆ ವಿವಿಧ ರಾಜಕೀಯ ನಾಯಕರು ಪುಷ್ಪ ನಮನ ಸಲ್ಲಿಸಿ ಸ್ಮರಿಸಿದ್ದಾರೆ. ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್, ರೈಲ್ವೆ ಸಚಿವ ಪೀಯುಷ್ ಗೋಯಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ
ಮತ್ತು ಸಿಪಿಐ(ಎಂ) ನೇತಾರ ಸೀತಾರಾಂ ಯೆಚೂರಿ ಮೊದಲಾದವರು ಗುಜ್ರಾಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.