ನವದೆಹಲಿ (ಐಎಎನ್ಎಸ್): ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಹಾಗೂ ಎಸ್ಸಾರ್ ಗುಂಪಿನ ಪ್ರವರ್ತಕ ರವಿ ರೂಯಿ ಅವರಿಗೆ ಸಮನ್ಸ್ ನೀಡಲಾಗಿರುವ 2ಜಿ ಹಗರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಇಲ್ಲಿಯ ಕೋರ್ಟ್ ಇದೇ 29ಕ್ಕೆ ಮುಂದೂಡಿ ಸೋಮವಾರ ಆದೇಶ ಹೊರಡಿಸಿದೆ.
ಸಮನ್ಸ್ ಹಿನ್ನೆಲೆಯಲ್ಲಿ ಮಿತ್ತಲ್, ರೂಯಿ ಹಾಗೂ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಶಮಲ್ ಘೋಷ್ ಸೋಮವಾರ ಕೋರ್ಟ್ಗೆ ಹಾಜರಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ 18ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ಕೋರ್ಟ್ನ ನ್ಯಾಯಮೂರ್ತಿ ಒ.ಪಿ. ಸೈನಿ ವಿಚಾರಣೆಯನ್ನು 29ಕ್ಕೆ ಮುಂದೂಡಿದರು.
ಹಿಂದೂ ನಿರಾಶ್ರಿತರ ಸ್ಥಿತಿ: ವರದಿಗೆ ಸೂಚನೆ
ನವದೆಹಲಿ (ಪಿಟಿಐ): ಹಿಂಸಾಚಾರ ಹಿನ್ನೆಲೆ ಪಾಕಿಸ್ತಾನವನ್ನು ತೊರೆದು ಬಂದಿರುವ, `ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ' ಸುಮಾರು 500 ಹಿಂದೂ ನಿರಾಶ್ರಿತರರ ಬಗೆಗೆ ವರದಿ ನೀಡುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೋರಿದೆ.
ಹಿಂಸಾಚಾರಕ್ಕೆ ಬೇಸತ್ತು ಪಾಕಿಸ್ತಾನ ತೊರೆದು ಬಂದಿದ್ದಾರೆ ಎನ್ನಲಾದ ಸುಮಾರು 500 ಹಿಂದುಗಳ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ಮಾಧ್ಯಮವೊಂದರ ವರದಿಯ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಪರಿಶೀಲನೆ ಕೈಗೆತ್ತಿಕೊಂಡಿರುವುದಾಗಿ ಎನ್ಎಚ್ಆರ್ಸಿ ತಿಳಿಸಿದೆ. `ಭಾರತಕ್ಕೆ ಬಂದಿರುವ ಪಾಕ್ ಹಿಂದೂಗಳ ಶೋಚನೀಯ ಸ್ಥಿತಿ ಕುರಿತು ವರದಿ ನೀಡುವಂತೆ ಗೃಹ ಮತ್ತು ವಿದೇಶಾಂಗ ಕಾರ್ಯದರ್ಶಿಗಳಿಗೆ ಹಾಗೂ ದೆಹಲಿ ಮುಖ್ಯಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.