ಅಟ್ಟಾರಿ–ವಾಘಾ ಗಡಿಯತ್ತ ಸಾಗಿದ ಪಾಕ್ ಪ್ರಜೆಯನ್ನು ದಿಟ್ಟಿಸಿದ ಬಿಎಸ್ಎಫ್ ಜವಾನ
ಪಿಟಿಐ ಚಿತ್ರ
ಅಮೃತಸರ: ದೇಶ ತೊರೆಯಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಅಂತ್ಯವಾಗಿದ್ದು, ಸುಮಾರು 21 ಪಾಕಿಸ್ತಾನದ ಪ್ರಜೆಗಳು ಅಟ್ಟಾರಿ– ವಾಘಾ ಗಡಿಯಲ್ಲಿ ಅತಂತ್ರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಕೇಂದ್ರ ಸರ್ಕಾರ, ಪಾಕಿಸ್ತಾನದ ಪ್ರಜೆಗಳಿಗೆ ನೀಡಿದ್ದ ಎಲ್ಲ ರೀತಿಯ ವೀಸಾಗಳನ್ನು ರದ್ದು ಮಾಡಿತ್ತು. ಏಪ್ರಿಲ್ 30ರ ಒಳಗಾಗಿ ದೇಶ ಬಿಟ್ಟು ಹೋಗುವಂತೆ ಆದೇಶ ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆಯೇ ಗುರುವಾರ ವಾಘಾ ಗಡಿಯನ್ನು ಮುಚ್ಚಲಾಗಿದೆ.
ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೆ 21 ಪಾಕ್ ಪ್ರಜೆಗಳು ಇಂಟಿಗ್ರೇಟೆಡ್ ಚೆಕ್ ಪೋಸ್ಟ್ನ ರಸ್ತೆ ಬದಿಯಲ್ಲಿ ಬೀಡು ಬಿಟ್ಟಿದ್ದರು.
ಸುಮಾರು 50 ಪಾಕ್ ಪ್ರಜೆಗಳು ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಹೊರಗೆ ಸರತಿಯಲ್ಲಿ ನಿಂತಿದ್ದರು. ಕಸ್ಟಮ್ಸ್ ಮತ್ತು ವಲಸೆ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಅವರು ಪಾಕ್ ಒಳಗೆ ಪ್ರವೇಶಕ್ಕೆ ಅನುಮತಿ ನೀಡಬಹುದು.
ಈ ಮಧ್ಯೆ, ಭಾರತದಲ್ಲಿ ಅತಂತ್ರರಾಗಿರುವ ಪ್ರಜೆಗಳು ವಾಘಾ ಗಡಿ ಮೂಲಕ ದೇಶಕ್ಕೆ ಬರಲು ಅನುವು ಮಾಡಿಕೊಡುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿದೆ.
‘ಪಾಕಿಸ್ತಾನದ ಪ್ರಜೆಗಳು ಅಟ್ಟಾರಿ ಗಡಿಯಲ್ಲಿ ಅತಂತ್ರರಾಗಿರುವ ಬಗ್ಗೆ ಮಾಧ್ಯಮ ವರದಿಗಳಿಂದ ತಿಳಿದಿದೆ. ಭಾರತೀಯ ಅಧಿಕಾರಿಗಳು ಗಡಿ ದಾಟಲು ಅವಕಾಶ ನೀಡಿದರೆ, ನಮ್ಮ ಪ್ರಜೆಗಳನ್ನು ಬರಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.