ADVERTISEMENT

ಸಿಖ್ಖರ ಕುರಿತ ಹೇಳಿಕೆಗೆ ಆಕ್ಷೇಪ: ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

ಪಿಟಿಐ
Published 21 ಸೆಪ್ಟೆಂಬರ್ 2024, 0:31 IST
Last Updated 21 ಸೆಪ್ಟೆಂಬರ್ 2024, 0:31 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ರಾಯಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಅಮೆರಿಕದಲ್ಲಿ ಸಿಖ್ಖರ ಕುರಿತು ನೀಡಿದ ಹೇಳಿಕೆಯ ವಿರುದ್ಧ ಛತ್ತೀಸಗಢದಲ್ಲಿ ಬಿಜೆಪಿ ನಾಯಕರು ಮೂರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಯಪುರ ಸಿವಿಲ್‌ ಲೈನ್ಸ್ ಪೊಲೀಸ್‌ ಠಾಣೆಯಲ್ಲಿ ಒಂದು, ಬಿಲಾಸ್‌ಪುರ ಜಿಲ್ಲಾ ಸಿವಿಲ್‌ ಲೈನ್ಸ್ ಠಾಣೆಯಲ್ಲಿ ಗುರುವಾರ ಎರಡು ಪ್ರಕರಣಗಳು ದಾಖಲಾಗಿವೆ. ದುರ್ಗ್ ಜಿಲ್ಲೆಯ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಒಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ರಾಹುಲ್‌ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 299 ಮತ್ತು 302ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಛತ್ತೀಸಗಢ ರಾಜ್ಯ ಬಿಜೆಪಿ ವಕ್ತಾರ ಅಮರ್‌ಜೀತ್ ಸಿಂಗ್‌ ಛಾಬ್ರಾ, ‘ರಾಹುಲ್ ಹೇಳಿಕೆಯೂ ಸಿಖ್‌ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ’ ಎಂದು ಆರೋಪಿಸಿ ರಾಯಪುರದಲ್ಲಿ ದೂರು ದಾಖಲಿಸಿದರು.

‘ಭಾರತದಲ್ಲಿ ಸಿಖ್ಖರಿಗೆ ಪಗಡಿ ಅಥವಾ ಕಡಾ ಧರಿಸಲು ಹಾಗೂ ಗುರುದ್ವಾರಕ್ಕೆ ಹೋಗಲು ಅನುಮತಿ ನೀಡುತ್ತಾರೆಯೇ’ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಹೇಳಿಕೆ ನೀಡಿರುವುದಾಗಿ ವಿವರಿಸಿದ್ದಾರೆ.

‘ಭಾರತ ಸೇರಿದಂತೆ ಇಡೀ ಪ್ರಪಂಚ ದಲ್ಲೇ ಸಿಖ್‌ ಸಮುದಾಯದವರು ಪಗಡಿ ಮತ್ತು ಕಡಾ ಧರಿಸಿ ಗುರುದ್ವಾರ ಪ್ರವೇಶಿಸುತ್ತಾರೆ. ಪ್ರಧಾನಿ ಕೂಡ ಪಗಡಿ ಮತ್ತು ಕಡಾ ಧರಿಸಿಯೇ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ’ ಎಂದು ಅಮರ್‌ಜೀತ್ ಸಿಂಗ್‌ ಛಾಬ್ರಾ ಹೇಳಿದ್ದಾರೆ.

ರಾಹುಲ್ ಹೇಳಿಕೆಯು ಶಾಂತಿಪ್ರಿಯ ಸಿಖ್‌ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವುದಾಗಿದೆ. ಇದು ಸಮಾಜದ ಇತರ ಧರ್ಮಗಳೊಂದಿಗೆ ತಾರತಮ್ಯ ಮತ್ತು ದ್ವೇಷವನ್ನು ಉಂಟು ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.